ADVERTISEMENT

ಹೈನುಗಾರಿಕೆಗೆ ಪ್ರೋತ್ಸಾಹ ಅಗತ್ಯ: ಸಂಸದ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:55 IST
Last Updated 20 ಸೆಪ್ಟೆಂಬರ್ 2011, 8:55 IST

ಚಿತ್ರದುರ್ಗ: ಪ್ರಸ್ತುತ ಸನ್ನಿವೇಶದಲ್ಲಿ ಲಾಭದಾಯಕ ಚಟುವಟಿಕೆಯಾಗಿರುವ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಬ್ಯಾಂಕ್‌ಗಳು ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಬೇಕೆಂದು ಸಂಸದ ಜನಾರ್ದನಸ್ವಾಮಿ ಬ್ಯಾಂಕರ್‌ಗಳಿಗೆ ಸಲಹೆ ನೀಡಿದರು.

ಸೋಮವಾರ ಲೀಡ್ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಬ್ಯಾಂಕರ್‌ಗಳ ಹಾಗೂ ವಿವಿಧ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪಶು ಸಂಗೋಪನೆ, ಕುರಿ ಸಾಕಾಣಿಕೆ  ಲಾಭದಾಯಕವಾಗಿವೆ. ಇಂತಹ ಲಾಭದಾಯಕ ಚಟುವಟಿಕೆ ಕೈಗೊಳ್ಳಲು ಬಂಡವಾಳದ ಕೊರತೆಯಿಂದ ಅನೇಕರಿಗೆ ಆಸಕ್ತಿ ಇದ್ದರೂ ಮಾಡಲು ಸಾಧ್ಯವಾಗುತ್ತಿಲ್ಲ.

ಆಸಕ್ತರಿಗೆ ಬ್ಯಾಂಕ್ ಸಾಲ ನೀಡಿದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಿ ಸ್ವಾವಲಂಬಿಯಾಗುತ್ತಾರೆ ಎಂದರು.
ಪಶುಸಂಗೋಪನೆ ಅಡಿ ಹಸು ಸಾಕಾಣಿಕೆ ಮಾಡಿ ಹಾಲನ್ನು ಡೈರಿಗೆ ಹಾಕಿದರೆ ಖರೀದಿ ದರದೊಂದಿಗೆ ಸರ್ಕಾರ ಲೀಟರ್‌ಗೆ ರೂ 2 ಪ್ರೋತ್ಸಾಹಧನ ನೀಡುತ್ತಿದೆ ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳಿಂದ ಜನ ಕಲ್ಯಾಣಕ್ಕಾಗಿ ನೂರಾರು ಯೋಜನೆ ಮಾಡಿದ್ದು, ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪಾತ್ರ ಬಹುಮುಖ್ಯವಾಗಿದೆ. ಎಲ್ಲ ಬ್ಯಾಂಕ್‌ಗಳಲ್ಲಿ ಸಾಮಾನ್ಯ ಜನರಿಗೆ ಸಿಗಬಹುದಾದ ಸಾಲ,ಸೌಲಭ್ಯಗಳ ಮಾಹಿತಿಯನ್ನು ಪ್ರಚುರಪಡಿಸಬೇಕಾಗಿದೆ.

ಯೋಜನೆ ಹಾಗೂ ಮಾಹಿತಿಯ ಕೊರತೆ ಆಗಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಿಲ್ಲಾ ಪಂಚಾಯ್ತಿಯಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಕ್ಕೆ ಎ್ಲ್ಲಲ ಬ್ಯಾಂಕ್‌ಗಳು ತಾವು ಕಲ್ಪಿಸುವ ಸೌಲಭ್ಯಗಳ ಮಾಹಿತಿ ನೀಡಬೇಕು.

ಇದರಿಂದ ಜನರು ಕಷ್ಟ ಕಾಲದಲ್ಲಿ ತಮಗೆ ದೊರೆಯಬಹುದಾದ ಸೌಲಭ್ಯಗಳ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ಸಾರ್ವಜನಿಕರಿಗೆ ಸಹಾಯ ಮಾಡಲು ಬ್ಯಾಂಕ್‌ಗಳಲ್ಲಿ ಅನೇಕ ಯೋಜನೆಗಳಿದ್ದರೂ ಸಿಬ್ಬಂದಿ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವವಾದರೂ ಇದೇ ನೆಪವಾಗಬಾರದು. ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ. ಮಹಾಲಿಂಗಪ್ಪ ಅವರು ಮಾತನಾಡಿ, ಕುರಿ ಸಾಕಾಣಿಕೆ ಲಾಭದಾಯಕ ಚಟುವಟಿಕೆಯಾಗ್ದ್ದಿದು, ಇದಕ್ಕೆ ಹೆಚ್ಚಿನ ನೆರವು ನೀಡಬೇಕಾಗಿದೆ. ಕುರಿ ಸಾಕಾಣಿಕೆಗಾಗಿ ಹಿಂದೆ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಅನೇಕ ಜನರು ಮರುಪಾವತಿಸದಿರಲು ಮಧ್ಯವರ್ತಿಗಳು ಕಾರಣರಾಗಿದ್ದಾರೆ.
 
ಆದರೆ ಇಂದು ಕಾಲ ಬದಲಾಗಿದ್ದು ಅನೇಕರು ಕುರಿ ಸಾಕಾಣಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಆದ್ದರಿಂದ  ಬ್ಯಾಂಕ್‌ನಿಂದ ಸಾಲ ಕಲ್ಪಿಸಿದರೆ ನಬಾರ್ಡ್‌ನಿಂದ ಸಹಾಯಧನ ಸಿಗಲಿದೆ. ಕುರಿ ಸಾಕಾಣಿಕೆ ಮಾಡಿ ಲಾಭ ಪಡೆದು ನಾನು ಯಶಸ್ಸು ಕಂಡಿದ್ದೇನೆ ಮತ್ತು ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಲು ಕುರಿ ಸಾಕಾಣಿಕೆಯೇ ಕಾರಣ ಎಂದು ತಿಳಿಸಿದರು.

ಭಾರತೀಯ ರಿಸರ್ವ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಬಾಲಕೃಷ್ಣನ್, ಕೆನರಾ ಬ್ಯಾಂಕ್ ಹುಬ್ಬಳ್ಳಿ ವೃತ್ತದ ವ್ಯವಸ್ಥಾಪಕ ಎ.ಆರ್. ಮೊಕಾಶಿ, ನಬಾರ್ಡ್ ಸಹಾಯಕ ಮಹಾಪ್ರಬಂಧಕ ಪ್ರಕಾಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಸಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.