ADVERTISEMENT

₹ 4.4 ಕೋಟಿ ವೆಚ್ಚದಲ್ಲಿ ತಾಳ್ಯ-ಕುಡಿನೀರಕಟ್ಟೆ ರಸ್ತೆ

₹ 6 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಎಂ. ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 13:35 IST
Last Updated 30 ನವೆಂಬರ್ 2020, 13:35 IST
ಹೊಳಲ್ಕೆರೆ ತಾಲ್ಲೂಕಿನ ಹಳೇಹಳ್ಳಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ಶಾಸಕ ಎಂ. ಚಂದ್ರಪ್ಪ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಹಳೇಹಳ್ಳಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ಶಾಸಕ ಎಂ. ಚಂದ್ರಪ್ಪ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.   

ಹೊಳಲ್ಕೆರೆ: ತಾಳ್ಯದಿಂದ ಸಿರಾಪನಹಳ್ಳಿ, ಸಿಹಿನೀರಕಟ್ಟೆ, ಹುಣಸೆ ಪಂಚೆ, ಕುಡಿನೀರಕಟ್ಟೆ ಮಾರ್ಗವಾಗಿ ನೇರವಾಗಿ ರಾಷ್ಟ್ರೀಯ ಹೆದ್ದಾರಿ–13ಕ್ಕೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಸಿರಾಪನಹಳ್ಳಿಯಲ್ಲಿ ಸೋಮವಾರ ₹ 4.4 ಕೋಟಿ ವೆಚ್ಚದ ತಾಳ್ಯ–ಕುಡಿನೀರಕಟ್ಟೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಳ್ಯದಿಂದ ತಾಲ್ಲೂಕು ಕೇಂದ್ರ ತಲುಪಲು ಮದ್ದೇರು, ಶಿವಗಂಗಾ, ಹಳೇಹಳ್ಳಿ ಮೂಲಕ ಸುತ್ತಿಕೊಂಡು ಹೋಗಬೇಕಾಗಿತ್ತು. ಇಲ್ಲಿಂದ ಕುಡಿನೀರಕಟ್ಟೆ ಗೇಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ ₹ 4.4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಾಣ ಆದ ನಂತರ ನೇರವಾಗಿ ಪಟ್ಟಣ ತಲುಪಬಹುದು. ₹ 100 ಕೋಟಿ ವೆಚ್ಚದಲ್ಲಿ ಮಲಸಿಂಗನಹಳ್ಳಿ ಗುಡ್ಡದಲ್ಲಿ ದೊಡ್ಡಕೆರೆ ನಿರ್ಮಿಸಿ ಪಟ್ಟಣದ ಚಿಕ್ಕಕೆರೆಯಿಂದ ಭದ್ರಾ ನೀರು ಹರಿಸಲಾಗುವುದು. ಇಲ್ಲಿಂದ ಟಿ.ಎಮ್ಮಿಗನೂರು, ಹಳೇಹಳ್ಳಿ, ಶಿವಗಂಗಾ, ತಾಳ್ಯ, ಎಚ್.ಡಿ. ಪುರ, ಕೆರೆಯಾಗಳ ಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ₹ 150 ಕೋಟಿ ಬಿಡುಗಡೆ ಆಗಿದೆ ಎಂದರು.

ADVERTISEMENT

ವಿ.ವಿ ಸಾಗರದಿಂದ ಕ್ಷೇತ್ರದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ₹ 350 ಕೋಟಿ ವೆಚ್ಚದ ಯೋಜನೆ ಮಂಜೂರಾಗಿದೆ. ತಾಲ್ಲೂಕಿನ ಘಟ್ಟಿಹೊಸಹಳ್ಳಿ ಗುಡ್ಡದಲ್ಲಿ ದೊಡ್ಡ ಟ್ಯಾಂಕ್ ನಿರ್ಮಿಸಿ, ಅಲ್ಲಿಂದ ಗುರುತ್ವಾಕರ್ಷಣೆ ಮಟ್ಟದಲ್ಲಿ ಎಲ್ಲಾ ಹಳ್ಳಿಗಳಿಗೆ ನೀರು ಹರಿಸಲಾಗುವುದು. ಒಂದು ವರ್ಷದ ಒಳಗೆ ಈ ಯೋಜನೆ ಜಾರಿಯಾಗಲಿದ್ದು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಚಂದ್ರಪ್ಪ ತಿಳಿಸಿದರು.

ಮದ್ದೇರು ಗ್ರಾಮದಲ್ಲಿ ₹ 38 ಲಕ್ಷ ವೆಚ್ಚದ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ, ದಾಸಯ್ಯನ ಹಟ್ಟಿ, ತಾಳ್ಯ, ನೇರಲಕಟ್ಟೆ, ಘಟ್ಟಿ ಹೊಸಹಳ್ಳಿ, ವೆಂಕಟೇಶ ಪುರ, ಹುಲಿಕೆರೆ, ಮಲಸಿಂಗನಹಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಶಾಲಾ ಕೊಠಡಿಗಳು, ಚೆಕ್ ಡ್ಯಾಂ, ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಚಂದ್ರಪ್ಪ ಚಾಲನೆ ನೀಡಿದರು.

ಲೋಕೋಪಯೋಗಿ ಎಇಇ ಮಹಾಬಲೇಶ್, ಬಿಇಒ ತಿಪ್ಪೇಸ್ವಾಮಿ, ಗುತ್ತಿಗೆದಾರ ರಾಜಶೇಖರ್, ದಾಸಯ್ಯನ ಹಟ್ಟಿ ರಮೇಶ್, ಚಿತ್ರಹಳ್ಳಿ ನಾಗರಾಜ್, ಮೋಹನ್ ಕುಮಾರ್, ಚಂದ್ರಪ್ಪ, ಸುರೇಶ್, ಹನುಮಂತಪ್ಪ, ಈಶ್ವರಪ್ಪ, ಗೋಪಾಲ್, ಮಂಜು, ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.