ADVERTISEMENT

ವಿದ್ಯುತ್ ಸೌಲಭ್ಯಕ್ಕೆ ₹550 ಕೋಟಿ ಅನುದಾನ

₹10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎಂ.ಚಂದ್ರಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 16:18 IST
Last Updated 15 ನವೆಂಬರ್ 2020, 16:18 IST
ಹೊಳಲ್ಕೆರೆಯಲ್ಲಿ ಭಾನುವಾರ ಶಾಸಕ ಎಂ.ಚಂದ್ರಪ್ಪ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಹೊಳಲ್ಕೆರೆಯಲ್ಲಿ ಭಾನುವಾರ ಶಾಸಕ ಎಂ.ಚಂದ್ರಪ್ಪ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.   

ಹೊಳಲ್ಕೆರೆ: ತಾಲ್ಲೂಕಿನಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಒದಗಿಸಲು ₹550 ಕೋಟಿ ಅನುದಾನ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ರಾಮಗಿರಿಯಲ್ಲಿ ಭಾನುವಾರ ₹10 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾಲ್ಲೂಕಿನ ಬಾಣಗೆರೆ ಸಮೀಪ ₹250 ಕೋಟಿ ವೆಚ್ಚದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಯಾಗಲಿದ್ದು, ಒಂದು ವರ್ಷದಲ್ಲಿ ಈ ಕಾಮಗಾರಿ ಮುಗಿಯಲಿದೆ. ಆಗ ತಾಲ್ಲೂಕಿನಲ್ಲಿ ವೋಲ್ಟೇಜ್ ಸಮಸ್ಯೆ ಬಗೆಹರಿಯಲಿದೆ. ಈಗ ಇರುವ ವಿದ್ಯುತ್ ಲೈನ್‌ಗಳನ್ನು ಸ್ವಾತಂತ್ರ್ಯಪೂರ್ವದಲ್ಲಿ ಹಾಕಿದ್ದು, ಹೆಚ್ಚು ವೋಲ್ಟೇಜ್ ಬಂದರೆ ತಡೆಯುವುದಿಲ್ಲ. ಪಂಡರಹಳ್ಳಿಯಿಂದ ನಮ್ಮ ತಾಲ್ಲೂಕಿಗೆ ₹23 ಕೋಟಿ ವೆಚ್ಚದ ಹೊಸ ಲೈನ್ ಮಂಜೂರು ಮಾಡಿಸಿದ್ದು, ಟೆಂಡರ್ ಹಂತದಲ್ಲಿದೆ. ಅನ್ನದಾತನ ಆಧಾರ ಸ್ತಂಭವಾಗಿರುವ ಅಡಿಕೆ ತೋಟಗಳಿಗೆ ಸಮರ್ಪಕ ವಿದ್ಯುತ್ ನೀಡಿದರೆ ರೈತರು ನೆಮ್ಮದಿಯಾಗಿ ಇರುತ್ತಾರೆ’ ಎಂದರು.

ADVERTISEMENT

‘ಕೋವಿಡ್ ಕಾರಣದಿಂದ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದರೂ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ರಸ್ತೆ ಕಾಮಗಾರಿಗೆ ₹300 ಕೋಟಿ, ಕೆರೆ, ಚೆಕ್ ಡ್ಯಾಂ ನಿರ್ಮಾಣಕ್ಕೆ ₹100 ಕೋಟಿ, ಕುಡಿಯುವ ನೀರಿಗೆ ₹400 ಕೋಟಿ ಅನುದಾನ ನೀಡಲಾಗಿದೆ. ಕ್ಷೇತ್ರದಲ್ಲಿ 200 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಾಲ್ಕೆರೆ ಕೆರೆಗೆ ನೀರು ತುಂಬಿಸಲು ₹22 ಕೋಟಿ ಅನುದಾನ ನೀಡಲಾಗಿದೆ’ ಎಂದು ಚಂದ್ರಪ್ಪ ತಿಳಿಸಿದರು.

ಅಂಜನಾಪುರದಲ್ಲಿ ₹ 40 ಲಕ್ಷ ವೆಚ್ಚದ ಡಾಂಬರ್ ರಸ್ತೆ, ದೊಗ್ಗನಾಳ್‌ನಲ್ಲಿ ₹ 15 ಲಕ್ಷ, ತುಪ್ಪದ ಹಳ್ಳಿಯಲ್ಲಿ ₹ 20 ಲಕ್ಷ, ದೇವರ ಹೊಸಹಳ್ಳಿಯಲ್ಲಿ ₹ 6 ಲಕ್ಷ, ಸಿಂಗೇನಹಳ್ಳಿಯಲ್ಲಿ ₹ 20 ಲಕ್ಷ, ಬಸಾಪುರದಲ್ಲಿ ₹ 15 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಗಳು, ದೊಗ್ಗನಾಳ್, ರಾಮಗಿರಿ, ಆರ್.ನುಲೇನೂರು, ಬಸಾಪುರ, ಗುಂಡಸಮುದ್ರದಲ್ಲಿ ಶಾಲಾ ಕೊಠಡಿ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು. ಬಿದರಕೆರೆ, ಲಂಬಾಣಿ ಹಟ್ಟಿ, ರಂಗಾಪುರ, ತುಪ್ಪದಹಳ್ಳಿ, ರಾಮಗಿರಿ, ದೇವರ ಹೊಸಹಳ್ಳಿ, ಸಿಂಗೇನಹಳ್ಳಿ, ಕಣಿವೆಹಳ್ಳಿ ಸಮೀಪ ಹರಿಯುವ ಹಳ್ಳಗಳಿಗೆ ಚೆಕ್ ಡ್ಯಾಂ ನಿರ್ಮಿಸುವ ಒಟ್ಟು ₹7.85 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಂದ್ರಪ್ಪ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ವರಪ್ಪ, ರಾಮಣ್ಣ, ಕುಮಾರಣ್ಣ, ಕಣಿವೆ ಹಳ್ಳಿ ಜಗದೀಶ್, ಸರಸ್ವತಿ, ಮುಖ್ಯಶಿಕ್ಷಕ ಗಂಗಾಧರಪ್ಪ, ಮರುಳಸಿದ್ದಪ್ಪ, ಕಾಲ್ಕೆರೆ ಜಗದೀಶ್, ಬಸವನ ಗೌಡ. ಲೋಕೋಪಯೋಗಿ ಇಲಾಖೆಯ ಎಇಇ ಮಹಾಬಲೇಶ್, ಬಿಇಒ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.