ಹಿರಿಯೂರು: ಈ ವರ್ಷದ ನವಂಬರ್ ಅಂತ್ಯದವರೆಗೆ ತಾಲ್ಲೂಕಿನಲ್ಲಿ ಪಶುಭಾಗ್ಯ ಯೋಜನೆಯಡಿ 161 ಫಲಾನುಭವಿಗಳಿಗೆ ₹ 21.2 ಕೋಟಿ ಸಹಾಯಧನ ವಿತರಿಸಲಾಗಿದೆ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿರಿಯೂರು ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಕೃಷಿಗೆ ಪೂರಕವಾದ ಒಂದು ಭಾಗ. ಕೃಷಿಯಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಮೊಲ, ಕೋಳಿ ಸಾಕಣೆ ಮಾಡಲು ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಪಶು ಸಾಕಣೆಯಿಂದ ಬರುವ ಸಾವಯವ ಗೊಬ್ಬರವನ್ನು ಕೃಷಿಗೆ ಬಳಸಿದಲ್ಲಿ ಉತ್ತಮ ಇಳುವರಿ ಪಡೆಯಬಹುದು. ಸಾವಯವ ಕೃಷಿಯಲ್ಲಿ ಉತ್ಪಾದಿಸಿದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ ಎಂದು ಅವರು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಹಾಕುವ ರೈತರಿಗೆ ಪ್ರತಿ ಲೀಟರ್ ಗೆ ₹ 5ರಂತೆ ಸರ್ಕಾರ ಸಹಾಯಧನ ನೀಡುತ್ತಿದ್ದು, ಇದರಿಂದ ರಾಸುಗಳ ನಿರ್ವಹಣೆಗೆ ಅನುಕೂಲವಾಗಿದೆ. ತಾಲ್ಲೂಕಿನಲ್ಲಿ 2013 ರಿಂದ 2017ರ ಆಗಸ್ಟ್ವರೆಗೆ 9,985 ಫಲಾನುಭವಿಗಳಿಂದ 2.71 ಕೋಟಿ ಲೀಟರ್ ಹಾಲು ಖರೀದಿಸಿ, ₹. 11.28 ಕೋಟಿ ಪ್ರೋತ್ಸಾಹ ಧನ ವಿತರಿಸಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಇಲಿಯಾಸ್ ಉಲ್ಲಾ ಷರೀಫ್ ಮಾತನಾಡಿದರು. ಉಪ ವ್ಯವಸ್ಥಾಪಕ ರಾಜಪ್ಪ, ಸಹಾಯಕ ವ್ಯವಸ್ಥಾಪಕ ಕುಮಾರಸ್ವಾಮಿ, ಶಿವಮೊಗ್ಗ ಹಾಲು ಒಕ್ಕೂಟದ ವಿತರಣಾಧಿಕಾರಿ ರಶ್ಮಿ, ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ. ರಾಜು, ವಿನೋದಾಸ್ವಾಮಿ, ಪಿ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.