ಹೊಳಲ್ಕೆರೆ: ಪಟ್ಟಣದಲ್ಲಿ ಶನಿವಾರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ಆಯೋಜಿಸಿದ್ದ ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ₹ 21 ಕೋಟಿ ವೆಚ್ಚದ ಕಾಮಗಾರಿಗೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿದರು.
‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಶೇ 50, ರಾಜ್ಯ ಸರ್ಕಾರ ಶೇ 40 ಹಾಗೂ ಸ್ಥಳೀಯ ಸಂಸ್ಥೆ ಶೇ 10 ಅನುದಾನ ನೀಡಲಿವೆ. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಪ್ರಧಾನಿ ಅವರ ಗುರಿಯಾಗಿದೆ. ಮುಂದಿನ 30 ವರ್ಷಗಳ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದ್ದು, ನಿತ್ಯ ಒಬ್ಬ ವ್ಯಕ್ತಿಗೆ 70 ಲೀಟರ್ನಷ್ಟು ನೀರು ಕೊಡಲಾಗುವುದು’ ಎಂದರು.
‘2008ರಲ್ಲಿ ನಾನು ಇಲ್ಲಿಗೆ ಶಾಸಕನಾಗಿ ಬಂದಾಗ ಕುಡಿಯುವ ನೀರಿಗೆ ಹಾಹಾಕಾರ ಇತ್ತು. ಆಗ ಸೂಳೆಕೆರೆಯಿಂದ ಕುಡಿಯುವ ನೀರು ತರುವ ಯೋಜನೆ ಜಾರಿಗೊಳಿಸಿ, ಪಟ್ಟಣದಲ್ಲಿ ದೊಡ್ಡ ಟ್ಯಾಂಕ್ಗಳನ್ನು ನಿರ್ಮಿಸಿದೆ. ಆದರೆ, ಬೇಸಿಗೆಯಲ್ಲಿ ಸೂಳೆಕೆರೆ ನೀರು ಕೂಡ ನಿಂತು ಹೋಗುವುದನ್ನು ಮನಗಂಡು ₹ 367 ಕೋಟಿ ವೆಚ್ಚದಲ್ಲಿ ವಾಣಿ ವಿಲಾಸ ಸಾಗರ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆ ಜಾರಿಗೊಳಿಸಿದೆ. ಈಗಾಗಲೇ ತಾಲ್ಲೂಕಿನ ಪ್ರತಿ ಹಳ್ಳಿಗೂ ಪೈಪ್ಲೈನ್ ಅಳವಡಿಸಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ವಿವಿ ಸಾಗರದಿಂದ ನೀರು ಹರಿಸಲಾಗುವುದು’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನಾ ವೇದಮೂರ್ತಿ, ಸದಸ್ಯರಾದ ಪಿ.ಆರ್. ಮಲ್ಲಿಕಾರ್ಜುನ ಸ್ವಾಮಿ, ಬಿ.ಎಸ್. ರುದ್ರಪ್ಪ, ಆರ್.ಎ. ಅಶೋಕ್, ಕೆ.ಸಿ. ರಮೇಶ್, ಸಯ್ಯದ್ ಸಜಿಲ್, ಸಯ್ಯದ್ ಮನ್ಸೂರ್, ಬಸವರಾಜ ಯಾದವ್, ಮಾಜಿ ಶಾಸಕ ಎ.ವಿ. ಉಮಾಪತಿ, ಶಿವಗಂಗಾ ಗಿರೀಶ್, ರೂಪಾ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಫಿರೋಜ್ ಖಾನ್ ಇದ್ದರು.
ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು ಬರುವುದರಿಂದ ಸೂರ್ಯ ಚಂದ್ರ ಇರುವವರೆಗೂ ಜಲಾಶಯ ಭರ್ತಿಯಾಗಿರುತ್ತದೆ. ಜಲಾಶಯದ ಮಧ್ಯದಲ್ಲಿ ಪೈಲ್ ಫೌಂಡೇಷನ್ ಮೂಲಕ ವೇದಿಕೆ ನಿರ್ಮಿಸಿದ್ದು ಅಲ್ಲಿಂದ ಏತ ನೀರಾವರಿ ಮೂಲಕ ತಾಲ್ಲೂಕಿಗೆ ಕುಡಿಯುವ ನೀರು ತರಲಾಗುತ್ತಿದೆ.ಎಂ.ಚಂದ್ರಪ್ಪ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.