ADVERTISEMENT

25 ಮಂದಿಗೆ ಉಚಿತ ಹೃದಯ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:10 IST
Last Updated 5 ಅಕ್ಟೋಬರ್ 2012, 5:10 IST

ಹಿರಿಯೂರು: ಬೆಂಗಳೂರಿನ ವಿಮ್ಸ ಆಸ್ಪತ್ರೆ ಸಿಬ್ಬಂದಿ ಹೃದಯ ರೋಗಕ್ಕೆ ತುತ್ತಾಗಿರುವ 25 ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲು ಮುಂದಾಗಿರುವುದು ಸಂತಸದ ವಿಷಯ ಎಂದು ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಎಚ್.ಎಸ್. ಸುಂದರರಾಜ್ ತಿಳಿಸಿದರು.


ನಗರದ ರೋಟರಿ ಸಭಾಭವನದಲ್ಲಿ ಗುರುವಾರ, ವಿಮ್ಸ ಆಸ್ಪತ್ರೆ ವೈದ್ಯರು ಈಚೆಗೆ ತಪಾಸಣೆ ಮಾಡಿ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದ್ದ 25 ಜನರನ್ನು ಬೆಂಗಳೂರಿಗೆ ಕಳುಹಿಸುವಂತೆ ಸೂಚಿಸಿದ್ದರ ಮೇರೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಶಾಲೆಗೆ ಹೋಗಿ ಕಲಿಯಬೇಕಿರುವ ಮಕ್ಕಳು ಹೃದಯ ರೋಗಕ್ಕೆ ಒಳಗಾಗಿ ಬಡತನದ ಕಾರಣಕ್ಕೆ ತಪಾಸಣೆಯನ್ನೂ ಮಾಡಿಸದೆ, ಬಡತನವನ್ನು ಶಪಿಸುತ್ತ ಕಾಲ ನೂಕುವಾಗ ರೆಡ್‌ಕ್ರಾಸ್ ಹಾಗೂ ನಗರದ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಬೆಂಗಳೂರಿನ ವಿಮ್ಸ ಆಸ್ಪತ್ರೆ ಸಿಬ್ಬಂದಿಯನ್ನು ಸಂಪರ್ಕಿಸಿದ ಪರಿಣಾಮ ಸುಮಾರು ಒಂದೂವರೆಯಿಂದ ರೂ ಎರಡು ಲಕ್ಷ ವರೆಗೆ ಆಗಬಹುದಾದ ಹೃದಯ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ವಿವರಿಸಿದರು.

ವೈದ್ಯರು ಈಗ ಆಯ್ಕೆ ಮಾಡಿರುವ ಎಲ್ಲರೂ ಕಡುಬಡವರು. ಬಹುತೇಕರು ಬದುಕಿಗೆ ಕೂಲಿಯನ್ನೇ ನಂಬಿರುವವರು. ಹೀಗಾಗಿ, ದುಬಾರಿ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟದ ಮಾತು. ಇವರನ್ನೆಲ್ಲ ಬೆಂಗಳೂರಿಗೆ ಉಚಿತವಾಗಿ ಕರೆದೊಯ್ದು, ಶಸ್ತ್ರಚಿಕಿತ್ಸೆ ನಂತರ ಮರಳಿ ಕರೆತರಲಾಗುತ್ತದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ. ಹೊಸ ಬದುಕು ಇವರೆಲ್ಲರಿಗೆ ಸಿಗಲಿ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಆರ್. ಅನಿಲ್‌ಕುಮಾರ್, ಕೆ.ಆರ್. ವೆಂಕಟೇಶ್, ವೈ.ಎಸ್. ಅಶ್ವತ್ಥಕುಮಾರ್, ಬಿ.ಎಸ್. ನವಾಬ್‌ಸಾಬ್, ಸೌಭಾಗ್ಯವತಿ ದೇವರು, ಎಚ್. ವೆಂಕಟೇಶ್, ಪಿ.ಆರ್. ಸತೀಶ್‌ಬಾಬು, ಪರಮೇಶ್ವರ ಭಟ್, ಗಜೇಂದ್ರಶರ್ಮ, ವಿಮ್ಸ ಆಸ್ಪತ್ರೆಯ ಪ್ರಮೋದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT