ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಒಂದು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ– 48ರ ಮಲ್ಲಾಪುರ ಸಮೀಪ ಗುರುವಾರ ಮುಂಜಾನೆ ಘಟನೆ ನಡೆದಿದ್ದು, ಮೃತರು ಗುಜರಾತ್ನಿಂದ ತಮಿಳುನಾಡಿಗೆ ಆಂಬುಲೆನ್ಸ್ನಲ್ಲಿ ಶವವೊಂದನ್ನು ಕೊಂಡೊಯ್ಯುತ್ತಿದ್ದರು.
ತಮಿಳುನಾಡಿನ ತಿರುನೆಲ್ವೇಲಿಯ ಕನಕಮಣಿ (72), ಆಕಾಶ್ (17) ಹಾಗೂ ಗುಜರಾತ್ನ ಆಂಬುಲೆನ್ಸ್ ಚಾಲಕ ಮನೀಶ್ ಮೃತರು. ಗಂಭೀರವಾಗಿ ಗಾಯಗೊಂಡಿರುವ ಜ್ಞಾನಶೇಖರ್ (51) ಹಾಗೂ ಮೌಳಿರಾಜನ್ (45) ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಿರುನೆಲ್ವೇಲಿಯ ಜ್ಞಾನಶೇಖರ್ ಅವರ ಕುಟುಂಬ ಗುಜರಾತ್ನ ಅಹಮದಾಬಾದ್ನಲ್ಲಿ ನೆಲೆಸಿದ್ದು, ಇವರ ತಾತ ಮುತ್ತಯ್ಯ (ತಾಯಿಯ ತಂದೆ) ಮೃತಪಟ್ಟಿದ್ದರು. ಸ್ವಂತ ಊರಲ್ಲಿ ಅಂತ್ಯಸಂಸ್ಕಾರ ಮಾಡುವ ಉದ್ದೇಶದಿಂದ, ತಾಯಿ ಕನಕಮಣಿ ಹಾಗೂ ಪುತ್ರ ಆಕಾಶ್ ಅವರೊಂದಿಗೆ ಜ್ಞಾನಶೇಖರ್ ಅವರು ಆಂಬುಲೆನ್ಸ್ನಲ್ಲಿ ಮೃತ ದೇಹದೊಂದಿಗೆ ಆಂಬುಲೆನ್ಸ್ನಲ್ಲಿ ಹೊರಟಿದ್ದರು.
‘ಗುಜರಾತ್ನಿಂದ ವಿರಾಮವಿಲ್ಲದೇ ಸತತ ವಾಹನ ಚಾಲನೆ ಮಾಡಿದ್ದರಿಂದ ಆಂಬುಲೆನ್ಸ್ ಚಾಲಕ ನಿದ್ದೆಗೆ ಜಾರಿರುವ ಸಾಧ್ಯತೆ ಇದೆ. ಆಂಬುಲೆನ್ಸ್ ಅತಿ ವೇಗವಾಗಿ ಬಂದು ರಸ್ತೆ ಬದಿಯ ಲಾರಿಗೆ ಡಿಕ್ಕಿ ಹೊಡೆದಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.