ADVERTISEMENT

ಮೂರು ಕಂತುಗಳಲ್ಲಿ ಭದ್ರಾ ಅನುದಾನ: ಸಚಿವರ ಭರವಸೆ

ದೆಹಲಿಯಲ್ಲಿ ಕೇಂದ್ರ ಸಚಿವ ಜೋಶಿ, ಸಂಸದರನ್ನು ಭೇಟಿ ಮಾಡಿದ ರೈತ ಮುಖಂಡರ ನಿಯೋಗ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 5:21 IST
Last Updated 5 ಆಗಸ್ಟ್ 2025, 5:21 IST
ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬಂದ ಜಿಲ್ಲೆಯ ರೈತ ಪ್ರತಿನಿಧಿಗಳು ಸೋಮವಾರ ಸದ್ಧರ್ಮ ನ್ಯಾಯಪೀಠದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾಹಿತಿ ನೀಡಿದರು
ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬಂದ ಜಿಲ್ಲೆಯ ರೈತ ಪ್ರತಿನಿಧಿಗಳು ಸೋಮವಾರ ಸದ್ಧರ್ಮ ನ್ಯಾಯಪೀಠದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾಹಿತಿ ನೀಡಿದರು   

ಸಿರಿಗೆರೆ: ‘ಕುಂಟುತ್ತಾ ಸಾಗುತ್ತಿರುವ ಭದ್ರಾ ಮೇಲ್ಡಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ₹ 5,300 ಕೋಟಿಗಳನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಎಚ್.ಆರ್.‌ ತಿಮ್ಮಯ್ಯ ತಿಳಿಸಿದರು.

ಸದ್ಧರ್ಮ ನ್ಯಾಯಪೀಠದಲ್ಲಿ ದೆಹಲಿಗೆ ಹೋಗಿದ್ದ ನಿಯೋಗದ ಮಾಹಿತಿಯನ್ನು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳೊಂದಿಗೆ ಹಂಚಿಕೊಂಡ ನಂತರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೆಹಲಿಗೆ ತೆರಳಿದ್ದ ರೈತ ಮುಖಂಡರು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿ. ಸೋಮಣ್ಣ ಹಾಗೂ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿದ್ದರು.

ADVERTISEMENT

‘ಭದ್ರಾ ಮೇಲ್ಡಂಡೆ ಯೋಜನೆ ಸುಮಾರು ₹ 21 ಸಾವಿರ ಕೋಟಿ ವೆಚ್ಚದ ರಾಜ್ಯ ಸರ್ಕಾರದ ಯೋಜನೆ. ಈ ಯೋಜನೆಗೆ ಸರ್ಕಾರವು ಇದುವರೆಗೆ ₹ 10 ಸಾವಿರ ಕೋಟಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಔದಾರ್ಯದಿಂದ ₹ 5,300 ಕೋಟಿಗಳನ್ನು ನೀಡಲು ಮುಂದಾಗಿತ್ತು. ರಾಜ್ಯ ಸರ್ಕಾರ ಕೇಂದ್ರದ ಈ ಅನುದಾನವನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಕಾಮಗಾರಿಯನ್ನು ನಿಧಾನಿಸಿದೆ’ ಎಂದು ತಿಳಿಸಿದರು.

‘ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ. ಅಂದಾಜಿನಂತೆ ಈ ಯೋಜನೆಯ ವೆಚ್ಚ ಈಗ ₹ 2000 ಕೋಟಿ ಹೆಚ್ಚಾಗಿದೆ. ಯೋಜನೆಯ ಕುಂಠಿತವಾಗಿರುವುದರಿಂದ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಭದ್ರಾ ಮೇಲ್ಡಂಡೆ ಯೋಜನೆಯ ನೀರಿನ ಆಸೆ ಇಟ್ಟುಕೊಂಡು ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಅಜ್ಜಂಪುರ ಬಳಿಯ ವಿವಾದವನ್ನು ಬಗೆಹರಿಸುವಲ್ಲಿ ಯಾರೂ ಮುಂದಾಗುತ್ತಿಲ್ಲ. ಈ ಯೋಜನೆ ಸರಿಯಾಗಿ ಸಾಗಿದ್ದರೆ ರೈತರ ಭೂಮಿಗೆ ಎಂದೋ ನೀರು ಹರಿಯುತ್ತಿತ್ತು’ ಎಂದು ವಿವರಿಸಿದರು.

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಟ್ಟದ ಹಾಲೂರು ಹಳ್ಳಕ್ಕೆ ನೈಸರ್ಗಿಕವಾಗಿ ಎತ್ತಿನ ಹೊಳೆ ನೀರು ಹರಿಸಿದರೆ, ಅದು ವೇದಾವತಿ ನದಿ ಕಣಿವೆಯಲ್ಲಿ ಹರಿದು ಸುಲಭವಾಗಿ ವಾಣಿ ವಿಲಾಸ ಸಾಗರ ಸೇರಿಕೊಳ್ಲೂತ್ತದೆ. ರಾಜ್ಯ ಸರ್ಕಾರವು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಈ ಯೋಜನೆಯಲ್ಲಿ ನೀರು ಒದಗಿಸಬೇಕೆಂದರು.

ರೈತ ಸಂಘದ ಅಧ್ಯಕ್ಷ ಚಿಕ್ಕಬ್ಬಿಗೆರೆ ನಾಗರಾಜ್‌, ಕಾರ್ಯದರ್ಶಿ ಎಂ.ಟಿ. ಸುರೇಶ್‌, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್‌, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎನ್.ಇ. ಕಾಂತರಾಜ್‌, ದಾವಣಗೆರೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪಿ.ಮರುಳಸಿದ್ಧಯ್ಯ, ಚಿಕ್ಕಬ್ಬಿಗೆರೆ ಎ.ತಿಪ್ಪೇಸ್ವಾಮಿ, ಹಿರೇಕಬ್ಬಿಗೆರೆ ಜಯಪ್ಪ, ಶಿವನಕೆರೆ ಸಿದ್ಧಬಸಪ್ಪ ಭಾಗಿಯಾಗಿದ್ದರು.

3 ಟಿಎಂಸಿ ಅಡಿಗೆ ಹೆಚ್ಚಿಸಿ

ಚಿತ್ರದುರ್ಗ ಜಿಲ್ಲೆಯ ಜಲಪಾತ್ರೆ ಎಂದೇ ಹೆಸರಾಗಿರುವ ವಾಣಿವಿಲಾಸ ಅಣೆಕಟ್ಟು ನಿರ್ಮಾಣವಾದಾಗಿನಿಂದ ಕೇವಲ 3 ಬಾರಿ ಮಾತ್ರ ಭರ್ತಿಯಾಗಿದೆ. 30 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಅಣೆಕಟ್ಟೆಗೆ ಭದ್ರಾ ಮೇಲ್ಡಂಡೆ ಯೋಜನೆಯ ಅಡಿಯಲ್ಲಿ ನಿಗದಿಯಾಗಿದ್ದ 5 ಟಿಎಂಸಿ ಅಡಿ ನೀರಿನ ಪ್ರಮಾಣವನ್ನು 2 ಟಿಎಂಸಿ ಅಡಿಗೆ ಇಳಿಸಿದೆ. ತುಮಕೂರು ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಅಡಿಯಲ್ಲಿ ವಾಣಿವಿಲಾಸ ಸಾಗರಕ್ಕೆ 3 ಟಿ.ಎಂ.ಸಿ. ಅಡಿ ನೀರು ಒದಗಿಸಬೇಕೆಂದು ಎಚ್.ಆರ್.‌ ತಿಮ್ಮಯ್ಯ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.