ADVERTISEMENT

ಭರಮಸಾಗರ ತಾಲ್ಲೂಕು ಕೇಂದ್ರ ಘೋಷಿಸದಿದ್ದರೆ ಹೋರಾಟ ತೀವ್ರ ಚುನಾವಣೆ ಬಹಿಷ್ಕಾರಕ್ಕೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 9:32 IST
Last Updated 5 ಜನವರಿ 2018, 9:32 IST

ಭರಮಸಾಗರ : ಚಿತ್ರದುರ್ಗದ ಹಿಂದುಳಿದ ಗಡಿ ಹೋಬಳಿ ಭರಮಸಾಗರವನ್ನು ತಾಲ್ಲೂಕು ಕೇಂದ್ರವಾಗಿಸಬೇಕು ಎಂಬ ಮೂರು ದಶಕಗಳ ಬೇಡಿಕೆ ಈಡೇರಿಸದೇ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹಾಕಿ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ತಾಲ್ಲೂಕು ಹೋರಾಟ ಸಮಿತಿ  ಆಗ್ರಹಿಸಿದೆ. ಈ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಬಸವೇಶ್ವರ ಸಮುದಾಯ ಭವನದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಭರಮಸಾಗರದ ವಿವಿಧ ಸಂಘಟನೆಗಳು, ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು, ಮಹಿಳಾ ಮುಖಂಡರು, ಮಹಿಳಾ ಸಂಘಟನೆಗಳು ಒಮ್ಮತದ ನಿರ್ಣಯ ಕೈಗೊಂಡರು.

ಚಿತ್ರದುರ್ಗ ತಾಲೂಕಿನ 16 ಗ್ರಾಮ ಪಂಚಾಯ್ತಿಗಳು, ದಾವಣಗೆರೆ ತಾಲೂಕಿನ ಎರಡು ಗ್ರಾಮ ಪಂಚಾಯ್ತಿಗಳು, ಜಗಳೂರು ತಾಲೂಕಿನ ಮೂರು ಗ್ರಾಮ ಪಂಚಾಯ್ತಿಗಳು ಸೇರಿ 20 ಗ್ರಾಮ ಪಂಚಾಯ್ತಿಯನ್ನು ಒಳಗೊಂಡ ತಾಲ್ಲೂಕನ್ನು ರಚಿಸಬಹುದು ಎಂಬ ದಾಖಲೆಗಳು ಸಿದ್ಧವಾಗಿ ದಶಕಗಳು ಕಳೆದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

20ಕ್ಕೂ ಹೆಚ್ಚು ಸರಕಾರಿ ಕಚೇರಿಗಳು ಗ್ರಾಮದಲ್ಲಿವೆ.  ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ತಾಲ್ಲೂಕನ್ನಾಗಿ ಘೋಷಿಸುವಂತೆ ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದರು. 2007ರ ಆ.30 ರಂದು ಹೋರಾಟ ಸಮಿತಿಯಿಂದ ತಾಲೂಕು ರಚಿಸುವಂತೆ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಅಂದು ಎಚ್.ಆಂಜನೇಯ ವಿಧಾನಸಭೆ ಸದನದ ಶೂನ್ಯ ವೇಳೆಯಲ್ಲಿ ಭರಮಸಾಗರ ತಾಲೂಕು ರಚಿಸುವಂತೆ ಸರಕಾರದ ಗಮನ ಸೆಳೆದಿದ್ದರು ಎಂದು ನೆನಪಿಸಿಕೊಂಡರು.

ಭರಮಸಾಗರ ತಾಲ್ಲೂಕು ಕೇಂದ್ರ ಆಗಿಯೇ ಬಿಡುತ್ತದೆಂಬ ನಂಬಿಕೆ ಇತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಭರವಸೆ ಕಳೆದುಕೊಳ್ಳುವಂತಾಗಿದೆ.  ಸರ್ಕಾರದ ಸ್ಪಂದಿಸದೇ ಇದ್ದರೆ  ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

* * ಈ ಹಿಂದೆ ತಾಲ್ಲೂಕು ಘೋಷಣೆಗಾಗಿ  ಎಚ್‌ ಆಂಜನೇಯ ಅವರೇ ನಮ್ಮ ಜತೆ ಸೇರಿ ಹೆದ್ದಾರಿ ಬಂದ್  ಭಾಗಿಯಾಗಿದ್ದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಭರಮಸಾಗರ ತಾಲ್ಲೂಕು ಘೋಷಣೆಗಾಗಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದರು ಈಗ ಅವರಿಗೆ ಅಧಿಕಾರವಿದೆ ಘೋಷಣೆ ಮಾಡಲಿ ಡಿ.ವಿ.ಶರಣಪ್ಪ, ಜಿಲ್ಲಾ ಪಂಚಾಯ್ತಿ  ಸದಸ್ಯ, ಭರಮಸಾಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.