ADVERTISEMENT

ಕಾಗಿನೆಲೆ ಗುರುಪೀಠದ ರಜತ ಮಹೋತ್ಸವ ಫೆ.8ರಿಂದ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 8:59 IST
Last Updated 17 ಜನವರಿ 2018, 8:59 IST
ಈಶ್ವರಾನಂದಪುರಿ ಸ್ವಾಮೀಜಿ
ಈಶ್ವರಾನಂದಪುರಿ ಸ್ವಾಮೀಜಿ   

ಚಿತ್ರದುರ್ಗ: ಕಾಗಿನೆಲೆ ಕನಕ ಗುರುಪೀಠ ಸ್ಥಾಪನೆಯಾಗಿ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಫೆ.8 ಮತ್ತು 9ರಂದು ಹರಿಹರದ ಬೆಳ್ಳೂಡಿಯ ಶಾಖಾ ಮಠದಲ್ಲಿ ರಜತ ಮಹೋತ್ಸವ ಮತ್ತು ಅದರ ನೆನಪಿಗಾಗಿ ನಿರ್ಮಿಸಿರುವ ತರಬೇತಿ ಕೇಂದ್ರದ ಕಟ್ಟಡ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಮತ್ತು ಕರ್ನಾಟಕ ಪ್ರದೇಶ ಕುರುಬರ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ. ಫೆ. 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಬೇತಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ಕಾಗಿನೆಲೆ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1992ರಲ್ಲಿ ಮಠ ಸ್ಥಾಪನೆ: 1992 ರ ಫೆ.8ರಂದು ಕಾಗಿನೆಲೆಯಲ್ಲಿ ಕನಕ ಗುರುಪೀಠ ಆರಂಭವಾಯಿತು. ಇದು ಅನೇಕ ಹಿಂದುಳಿದ ವರ್ಗಗಳ ಗುರುಪೀಠ ಸ್ಥಾಪನೆಗೆ ಪ್ರೇರಣೆಯಾಯಿತು. ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಪ್ರಥಮ ಪೀಠಾಧ್ಯಕ್ಷರು. ಅವರು ಲಿಂಗೈಕ್ಯರಾದ ನಂತರ ನಿರಂಜನಾನಂದಪುರಿ ಸ್ವಾಮೀಜಿ ಪೀಠವನ್ನು ಮುನ್ನಡೆಸುತ್ತಿದ್ದಾರೆ. ಎರಡೂವರೆ ದಶಕಗಳಿಂದ ಕಾಗಿನೆಲೆ ಮಠ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.

ADVERTISEMENT

ಶೈಕ್ಷಣಿಕವಾಗಿ ಸಮುದಾಯವನ್ನು ಅಭಿವೃದ್ಧಿಗೊಳಿಸಲು ಶಾಲೆ, ಕಾಲೇಜು, ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದೆ. ಬೆಂಗಳೂರು, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲಿ ನಾಲ್ಕು ಶಾಖಾ ಮಠಗಳನ್ನು ಸ್ಥಾಪಿಸಿದೆ. ಇತ್ತೀಚೆಗೆ ದಾವಣಗೆರೆ ಜಿಲ್ಲೆ ಹರಿಹರ ಸಮೀಪದ ಬೆಳ್ಳೂಡಿಯಲ್ಲಿ 210 ದಿನಗಳಲ್ಲಿ ₹ 2 ಕೋಟಿ ವೆಚ್ಚದಲ್ಲಿ ಶಾಖಾಮಠವನ್ನು ಸ್ಥಾಪಿಸಿದೆ. ಪೀಠದ ರಜತ ಮಹೋತ್ಸವದ ನೆನಪಿಗಾಗಿ ಆ ಶಾಖಾ ಮಠದ ಆವರಣದಲ್ಲಿ ಐಎಎಸ್‌, ಕೆಎಸ್‌ನಂತಹ ಸ್ಪರ್ಧಾತ್ಮಕ ಕೋರ್ಸ್‌ಗಳಿಗೆ ತರಬೇತಿ ನೀಡಲು ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಸ್ವಾಮೀಜಿ ಕನಕಪೀಠದ ಬೆಳವಣಿಗೆಯನ್ನು ವಿವರಿಸಿದರು.

23ರಿಂದ ‘ಕನಕಜ್ಯೋತಿ’ ರಥಯಾತ್ರೆ: ಫೆ.8ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 9ರಂದು ಕೇಂದ್ರ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಜನವರಿ 23ರಿಂದ ರಾಜ್ಯದ ನಾಲ್ಕೂ ಶಾಖಾಮಠಗಳಿಂದ ‘ಕನಕ ಜ್ಯೋತಿ ರಥಯಾತ್ರೆ’ ಹೊರಡಲಿದೆ. ಕೋಲಾರದ ಮುಳಬಾಗಿಲಿಂದ ಆರಂಭವಾಗುವ ರಥಯಾತ್ರೆ ಫೆ. 5ರಂದು ಹೊಸದುರ್ಗ ಮೂಲಕ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಲಿದೆ. ಫೆ. 6ರಂದು ಜಗಳೂರು ಮೂಲಕ ದಾವಣಗೆರೆ ಜಿಲ್ಲೆ ಪ್ರವೇಶಿಸಿ, ಫೆ.7ರಂದು ದಾವಣಗೆರೆಯಿಂದ ಹರಿಹರದವರೆಗೆ ರಥಯಾತ್ರೆ ನಡೆಯಲಿದೆ. ಫೆ.8ರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಕರ್ನಾಟಕ ಪ್ರದೇಶ ಕುರುಬ ಸಮಾಜದ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ, ‘ಹರಿಹರದ ಶಾಖಾ ಮಠ ಜನರಿಗೆ ಹೆಚ್ಚು ಪರಿಚಯವಾಗಲಿ ಎಂಬ ದೃಷ್ಟಿಯಿಂದ ರಜತ ಮಹೋತ್ಸವ ಕಾರ್ಯಕ್ರಮವನ್ನು ಬೆಳ್ಳೂಡಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ದಿನವೇ ₹ 10 ಕೋಟಿ ವೆಚ್ಚದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕುರುಬರ ಸಂಘದ ರಾಜ್ಯ ನಿರ್ದೇಶಕರಾದ ಸೂರಲಿಂಗಪ್ಪ, ಅನುಸೂಯಮ್ಮ, ಜಿಲ್ಲಾಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಕರಿಯಪ್ಪ, ತಾಲ್ಲೂಕು ಸಂಘದ ಅಧ್ಯಕ್ಷ ಜಗನ್ನಾಥ್, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.