ADVERTISEMENT

7.8 ಸೆಂ.ಮೀ. ಮಳೆ: ತುಂಬಿದ ಚೆಕ್ ಡ್ಯಾಂ

ದೇವಸಮುದ್ರ ಹೋಬಳಿಯಲ್ಲಿ ಮುಂಗಾರು ಬಿತ್ತನೆ ಆರಂಭ

ಕೊಂಡ್ಲಹಳ್ಳಿ ಜಯಪ್ರಕಾಶ
Published 19 ಮೇ 2022, 2:59 IST
Last Updated 19 ಮೇ 2022, 2:59 IST
ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಹೋಬಳಿಯ ಹೊಲಗಳಲ್ಲಿ ಮಂಗಳವಾರ ಸುರಿದ ಮಳೆಗೆ ನೀರು ನಿಂತಿರುವುದು
ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಹೋಬಳಿಯ ಹೊಲಗಳಲ್ಲಿ ಮಂಗಳವಾರ ಸುರಿದ ಮಳೆಗೆ ನೀರು ನಿಂತಿರುವುದು   

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಉತ್ತಮ ಮಳೆಯಾಗಿದ್ದು, ರೈತರು ಮುಂಗಾರು ಬಿತ್ತನೆ ಕಾರ್ಯಗಳನ್ನು ಕೈಗೊಳ್ಳಲು ಉತ್ಸಾಹದಿಂದತಯಾರಿಆರಂಭಿಸಿದ್ದಾರೆ.

ಈ ವರ್ಷ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಮೂರು ಸಾರಿ ಹದ ಮಳೆಯಾಗಿತ್ತು. ಆದರೆ ದೇವಸಮದ್ರ ಹೋಬಳಿಯಲ್ಲಿ ಮಳೆ ಬರಲಿಲ್ಲ ಎಂಬ ಕೊರಗುರೈತರನ್ನು ಕಾಡುತ್ತಿತ್ತು. ಮಂಗಳವಾರ ಸುರಿದ ಮಳೆಯು ಈ ಕೊರಗನ್ನು ಹೋಗಲಾಡಿಸಿದೆ. ತಾಲ್ಲೂಕು ಕಚೇರಿ ಮೂಲಗಳ ಪ್ರಕಾರ ದೇವಸಮುದ್ರ ಮಳೆಮಾಪನ ಕೇಂದ್ರದಲ್ಲಿ 78.2 ಮಿ.ಮೀ. ದಾಖಲೆಯ ಮಳೆ, ರಾಂಪುರ ಕೇಂದ್ರದಲ್ಲಿ 70.1 ಮಿ.ಮೀ., ಮೊಳಕಾಲ್ಮುರು ಕೇಂದ್ರದಲ್ಲಿ 34 ಮಿ.ಮೀ., ಬಿ.ಜಿ.ಕೆರೆ ಕೇಂದ್ರದಲ್ಲಿ 19 ಮಿ.ಮೀ. ಮತ್ತು ರಾಯಾಪುರ ಮಾಪನ ಕೇಂದ್ರದಲ್ಲಿ 14 ಮಿ.ಮೀ. ಮಳೆ ದಾಖಲಾಗಿದೆ.

ದೇವಸಮುದ್ರ ಹೋಬಳಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಯಾಶ್ರಿತ ಪ್ರದೇಶದಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ ಬಿತ್ತನೆ ಮಾಡಲಾಗುತ್ತದೆ. ಬುಧವಾರದಿಂದ ಸಂತೇಗುಡ್ಡ, ಬಾಂಡ್ರಾವಿ, ಜಾಗೀರಬುಡ್ಡೇನಹಳ್ಳಿ, ಮೇಗಲಕಣಿವೆ, ಶಿರೇಕೊಳ, ತಮ್ಮೇನಹಳ್ಳಿ, ದೇವಸಮುದ್ರ, ವೆಂಕಟಾಪುರ, ಅಶೋಕ ಸಿದ್ದಾಪುರ, ಬಸಾಪುರ, ಹುಚ್ಚಂಗಿದುರ್ಗ, ಮೇಗಲಕಣಿವೆ, ಬೊಮ್ಮದೇವರಹಳ್ಳಿ, ಹೊಸ ದಡಗೂರು ಸೇರಿ ಸುತ್ತಲಿನಗ್ರಾಮಗಳ‌ಲ್ಲಿ ಬಿತ್ತನೆ ಆರಂಭಿಸಲಾಗಿದೆ ಎಂದು ರಾಂಪುರ ನಾಡಕಚೇರಿ ಶೀರಸ್ತೇದಾರ್ ಗೋಪಾಲ್ ಮಾಹಿತಿ ನೀಡಿದರು.

ADVERTISEMENT

ಮಳೆಯಿಂದ ಚೆಕ್ ಡ್ಯಾಂ, ಬದುವುಗಳಲ್ಲಿ ಉತ್ತಮವಾಗಿ ನೀರು ಸಂಗ್ರಹವಾಗಿದ್ದು, ಬಿಸಿಲಿನ ತಾಪಕ್ಕೆ ರೋಸಿ ಹೋಗಿದ್ದ ಜನರು ಸ್ವಲ್ಪ ಸಮಾಧಾನಗೊಂಡಿದ್ದಾರೆ. ಇದು ಈ ವರ್ಷದ ದೊಡ್ಡ ಮತ್ತು ಪ್ರಥಮ ಮಳೆಯಾಗಿದ್ದು, ಮತ್ತೆ ಮಳೆ ಬಂದಲ್ಲಿ ಹಳ್ಳಗಳು ಹರಿಯಲು, ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಸತತವಾಗಿ ಈ ಭಾಗದಲ್ಲಿ ಮಳೆನಷ್ಟವನ್ನು ಅನುಭವಿಸಲಾಗಿದೆ. ಜತೆಗೆ ಫಸಲ್ ಬಿಮಾ ಯೋಜನೆ ಸಹ ಕೈ ಹಿಡಿದಿಲ್ಲ. ಈ ಬಾರಿ ವಿಮೆ ಕಂಪನಿ ಜತೆ ಮಾತುಕತೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು
ಪ್ರಾಂತ ರೈತ ಸಂಘ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.