ಚಿತ್ರದುರ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಪ್ರಜಾತಂತ್ರ ವಿರೋಧಿ ಕೃತ್ಯವಾಗಿದ್ದು, ಗೃಹ ಇಲಾಖೆ ಹಾಗೂ ಮುಖ್ಯಮಂತ್ರಿ ಹೊಣೆ ಹೊರಬೇಕು ಎಂದು ಎಎಪಿ ಮುಖಂಡ ಆರ್.ಶೇಷಣ್ಣಕುಮಾರ್ ಒತ್ತಾಯಿಸಿದ್ದಾರೆ.
‘ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ವಿರೋಧ ಪಕ್ಷದ ನಾಯಕರಿಗೆ ತೋರುವ ಅಗೌರವ. ಕೊಡಗು ಜಿಲ್ಲೆಯ ಬಿಜೆಪಿ ಬೆಂಬಲಿತರು ಈ ಕೃತ್ಯ ಎಸಗಿದ್ದು ಪ್ರಜಾತಂತ್ರವನ್ನು ಅಣಕಿಸಿದಂತಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ನಾಯಕರಿಗೆ ಇಂತಹ ಸ್ಥಿತಿ ಎದುರಾದರೆ ಸಾಮಾನ್ಯ ಜನರ ಪಾಡೇನು’ ಎಂದು ಪ್ರಶ್ನಿಸಿದ್ದಾರೆ.
‘ಈ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ಪ್ರಜಾತಂತ್ರ ವಿರೋಧಿ ಚಟುವಟಿಕೆ ನಡೆಯದಂತೆ ಹಾಗೂ ತಾರತಮ್ಯಕ್ಕೆ ಎಡೆಮಾಡಿಕೊಡದಂತೆ ಸರ್ಕಾರ ಎಚ್ಚರವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಬಿಜೆಪಿಯ ಕೋಮುವಾದಿ ಮನಸ್ಥಿತಿಯ ನಾಯಕರು ರಾಜ್ಯದ ಸ್ವಾಸ್ಥ್ಯವನ್ನು ಕದಡುತ್ತಿದ್ದಾರೆ. ಕಾಯಕ ಜೀವಿಗಳನ್ನು ಅವಮಾನಿಸಿದ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ಮನೆ ಎದುರು ಗೂಂಡಾಗಿರಿ ಪ್ರದರ್ಶಿಸಿದ ಸಂಸದರೊಬ್ಬರಿಂದ ಬಿಜೆಪಿ ಕಾರ್ಯಕರ್ತರು ಪ್ರಚೋದನೆ ಪಡೆದಂತೆ ಕಾಣುತ್ತಿದೆ. ರಾಜ್ಯದ ಘನತೆ, ಗೌರವವನ್ನು ಬಿಜೆಪಿ ಮಣ್ಣುಪಾಲು ಮಾಡುತ್ತಿದೆ’ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.