ಪರಶುರಾಂಪುರ: ಚಳ್ಳಕೆರೆ ತಾಲ್ಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಶೇಂಗಾ ಕಟಾವು ಮಾಡಿದ್ದು, ಅದನ್ನು ಮನಗೆ ತರಲು ಎತ್ತಿನ ಗಾಡಿಯನ್ನು ಬಳಸುತ್ತಾರೆ. ರಾತ್ರಿ ವೇಳೆ ಎತ್ತಿನಗಾಡಿಗೆ ಬೆಳಕು ಇಲ್ಲದ ಕಾರಣ ಅಪಘಾತಗಳು ನಡೆಯುತ್ತವೆ. ಅವುಗಳನ್ನು ತಪ್ಪಿಸಲು ಪರಶುರಾಂಪುರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಕೈಗೊಂಡಿದೆ.
ಕೃಷಿ ಚಟುವಟಿಕೆ ಮುಗಿಸಿ ರಾತ್ರಿ ಹೊತ್ತು ಹೋಗುವ ಎತ್ತಿನಗಾಡಿಗಳು ಮುಂದೆ ಹಾಗೂ ಹಿಂಬದಿಯಿಂದ ಬರುವ ವಾಹನಗಳಿಗೆ ಸುಲಭವಾಗಿ ಕಾಣುವಂತೆ ಕೆಂಪು ಬಣ್ಣದ ರೇಡಿಯಂ ಸ್ಟಿಕ್ಕರ್ ಅನ್ನು ಪೊಲೀಸರು ತಮ್ಮ ಸ್ವಂತ ಹಣದಲ್ಲಿ ಹಾಕುತ್ತಿದ್ದಾರೆ. ಪೊಲೀಸರ ಈ ಕ್ರಮ ರೈತರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯದ ಗಡಿಯನ್ನು ಹೊಂದಿಕೊಂಡಿರುವ ಈ ಹೋಬಳಿಯು ಚಿತ್ರದುರ್ಗ, ತುಮಕೂರು, ಬಳ್ಳಾರಿ, ಅಂಧ್ರಪ್ರದೇಶದ ಅನಂತಪುರ, ಹಿಂದೂಪುರಕ್ಕೆ ಹೋಗುವ ವಾಹನಗಳು ಇಲ್ಲಿಂದಲೇ ಹೋಗಬೇಕು. ಹಾಗಾಗಿ ವಾಹನ ದಟ್ಟಣೆ ಹೆಚ್ಚು. ರೈತರು ಎಚ್ಚರಿಕೆಯಿಂದ ಇರಬೇಕು.ರೇಡಿಯಂ ಸ್ಟಿಕ್ಕರ್ ಹಾಕುವುದರಿಂದ ಎದುರಿನ ವಾಹನಗಳಿಗೆ ಎತ್ತಿನಗಾಡಿ ಇರುವುದು ತಿಳಿಯುತ್ತದೆ ಎನ್ನುತ್ತಾರೆ ಪಿಎಸ್ಐಚಂದ್ರಶೇಖರ್.
ಈಚೆಗೆ ಎತ್ತಿನಗಾಡಿ ಮತ್ತು ಲಾರಿ ಮಧ್ಯೆ ಗೌರಿಪುರದ ಬಳಿ ಅಪಘಾತವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಮೂಕ
ಪ್ರಾಣಿಗಳ ಜೀವ ಉಳಿಸಲು ಮುಂದಾಗಿದೆ. ಇದರಿಂದ ಎಲ್ಲರಿಗೂ ಅನುಕೂಲ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.