ADVERTISEMENT

ಉದ್ಯೋಗಸ್ಥರಿಗೆ ನೆರವಾದ ಶಿಶುಪಾಲನಾ ಕೇಂದ್ರ

ಚಿತ್ರದುರ್ಗದಲ್ಲಿ ಒಂದು ಕೇಂದ್ರ ಆರಂಭ, ಮತ್ತೊಂದಕ್ಕೆ ಸ್ಥಳ ಪರಿಶೀಲನೆ

ಜಿ.ಬಿ.ನಾಗರಾಜ್
Published 7 ಜುಲೈ 2022, 4:34 IST
Last Updated 7 ಜುಲೈ 2022, 4:34 IST
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಶಿಶುಪಾಲನಾ ಕೇಂದ್ರ
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಶಿಶುಪಾಲನಾ ಕೇಂದ್ರ   

ಚಿತ್ರದುರ್ಗ: ಉದ್ಯೋಗಸ್ಥ ಮಹಿಳೆಯರ ಚಿಕ್ಕ ಮಕ್ಕಳ ಪಾಲನೆಗೆ ಶಿಶುಪಾಲನಾ ಕೇಂದ್ರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತೆರೆಯುತ್ತಿದೆ. ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮೊದಲ ಕೇಂದ್ರ ಆರಂಭವಾಗಿದ್ದು, ಮತ್ತೊಂದಕ್ಕೆ ಸ್ಥಳ ಪರಿಶೀಲನೆ ನಡೆಯುತ್ತಿದೆ.

‘ಡೇ ಕೇರ್‌’ ಮಾದರಿಯ ಶಿಶುಪಾಲನಾ ಕೇಂದ್ರಗಳು ಸಣ್ಣ ಅಂಗನವಾಡಿಯ ಸ್ವರೂಪ ಪಡೆಯುತ್ತಿವೆ. ಮಕ್ಕಳ ಪಾಲನೆ ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ಇದೆ. ಆಟ,ಊಟ ಹಾಗೂ ಕಲಿಕೆಒಂದೆಡೆ ಸಿಗುವುದರಿಂದ ಉದ್ಯೋಗಸ್ಥ ಮಹಿಳೆಯರಿಗೂ ಇಷ್ಟವಾಗುತ್ತಿದೆ.

ಸರ್ಕಾರಿ ನೌರಕರರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಿಶುಪಾಲನಾ ಕೇಂದ್ರಗಳನ್ನು 2021ರಲ್ಲಿ ರೂಪಿಸಲಾಯಿತು. ಸರ್ಕಾರಿ ನೌಕರರು ಹೆಚ್ಚಾಗಿರುವ ಸ್ಥಳವನ್ನೇ ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಸರ್ಕಾರ ಇದರ ರೂಪುರೇಷ ಬದಲಿಸಿದ್ದು, ಖಾಸಗಿ ಕಂಪನಿ ಸಿಬ್ಬಂದಿ ಹಾಗೂ ದುಡಿಯುವ ಮಹಿಳೆಯರ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಆರಂಭದಲ್ಲಿ ಎರಡು ಕೇಂದ್ರಗಳನ್ನು ಚಿತ್ರದುರ್ಗಕ್ಕೆಮಂಜೂರು ಮಾಡಲಾಗಿದೆ.ಜಿಲ್ಲಾ ಪಂಚಾಯಿತಿ ಆವರಣದಲ್ಲಿ ತೆರೆದಿರುವ ಕೇಂದ್ರದಲ್ಲಿ 8 ತಿಂಗಳಿಂದ 6 ವರ್ಷದವರೆಗಿನ 15 ಮಕ್ಕಳಿದ್ದಾರೆ. ನಿತ್ಯ ಬೆಳಿಗ್ಗೆ 9ರಿಂದ ಸಂಜೆ 6ವರೆಗೆ ಇದು ಕಾರ್ಯನಿರ್ವಹಿಸುತ್ತದೆ. ಹಾಲು, ಮಾಲ್ಟ್‌, ಊಟವನ್ನು ಮಕ್ಕಳಿಗೆ ನೀಡಲಾಗುತ್ತದೆ. ‘ಅಧಿರಕ್ಷಣಾ ಸಮಾಜ ಸೇವಾ ಸಂಸ್ಥೆ’ ಈ ಕೇಂದ್ರದ ಜವಾಬ್ದಾರಿ ಹೊತ್ತಿದೆ. ಬಿ.ಇಡಿ ಪದವಿ ಪಡೆದ ಒಬ್ಬ ಶಿಕ್ಷಕಿ ಹಾಗೂ ಎಸ್ಸೆಸ್ಸೆಲ್ಸಿ ಶಿಕ್ಷಣದ ಅರ್ಹತೆ ಹೊಂದಿರುವ ಇಬ್ಬರು ಸಹಾಯಕಿಯರು ಇಲ್ಲಿದ್ದಾರೆ.

ಮತ್ತೊಂದು ಕೇಂದ್ರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲು ಉದ್ದೇಶಿಸಲಾಗಿತ್ತು. ಸ್ಥಳಾವಕಾಶದ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ನಗರಸಭೆ, ಜಿಲ್ಲಾ ಆಸ್ಪತ್ರೆ, ನ್ಯಾಯಾಲಯದಲ್ಲಿಯೂ ಸ್ಥಳಾವಕಾಶದ ಸಮಸ್ಯೆ ಎದುರಾಗಿದೆ. ಸ್ಥಳ ಗುರುತಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಶಿಶುಪಾಲನಾ ಕೇಂದ್ರ ಗಳನ್ನು ತಾಲ್ಲೂಕುಗಳಲ್ಲೂ ತೆರೆಯುವಕುರಿತು ಸರ್ಕಾರ 2022ರ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. 2022ನೇಬಜೆಟ್‌ನಲ್ಲಿ ಎರಡು ಶಿಶುಪಾಲನಾ ಕೇಂದ್ರಗಳು ಮಂಜೂರಾಗಿದ್ದು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದೆ.

ಗಾರ್ಮೆಂಟ್ಸ್‌ ಬಳಿ ಪರಿಶೀಲನೆ

ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿರುವ ಮತ್ತೊಂದು ಶಿಶುಪಾಲನಾ ಕೇಂದ್ರವನ್ನು ಗಾರ್ಮೆಂಟ್ಸ್‌ ಮಹಿಳೆಯರಿಗೆ ನೆರವಾಗುವಂತೆ ತೆರೆಯಲು ಜನಪ್ರತಿನಿಧಿಗಳು ಸಲಹೆ ನೀಡಿದ್ದಾರೆ. ಮಾಳಪ್ಪನಹಟ್ಟಿ ಸಮೀಪದಲ್ಲಿ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

‘ಸಚಿವ ಹಾಲಪ್ಪ ಆಚಾರ್‌ ಸಲಹೆ ಮೇರೆಗೆ ಸ್ಥಳಕ್ಕೆ ಹುಡುಕಾಟ ನಡೆಸಲಾಗುತ್ತಿದೆ. 25 ಮಕ್ಕಳು ಲಭ್ಯ ಇರುವ ಸ್ಥಳದಲ್ಲಿ ಕೇಂದ್ರ ತೆರೆಯಲು ಅವಕಾಶವಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ ತಿಳಿಸಿದರು.

---

ಉದ್ಯೋಗಸ್ಥ ಮಹಿಳೆಯರು ಮಕ್ಕಳ ಪಾಲನೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ತಾಯಂದಿರ ನೆರವಿಗೆ ಈ ಕೇಂದ್ರ ತೆರೆಯಲಾಗುತ್ತಿದೆ. ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

–ಭಾರತಿ ಬಣಕಾರ, ‌ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.