ADVERTISEMENT

ಚಿತ್ರದುರ್ಗ: ತೃತೀಯ ಲಿಂಗಿಗಳಿಗೆ ಬಿಜೆಪಿಯಿಂದ ಬಾಗಿನ

ಸ್ವಾವಲಂಬಿಗಳಾದರೆ ನಿಮ್ಮನ್ನು ಯಾರು ಕೀಳಾಗಿ ಕಾಣಲಾರರು: ಸಚಿವ ಎ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 13:02 IST
Last Updated 9 ಸೆಪ್ಟೆಂಬರ್ 2021, 13:02 IST
ಗೌರಿ ಗಣೇಶ ಹಬ್ಬದ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕದಿಂದ ಚಿತ್ರದುರ್ಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಕಾರ್ಯಕರ್ತೆಯರು ತೃತೀಯ ಲಿಂಗಿಗಳಿಗೆ ಬಾಗಿನ ಅರ್ಪಿಸುತ್ತಿರುವುದು
ಗೌರಿ ಗಣೇಶ ಹಬ್ಬದ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕದಿಂದ ಚಿತ್ರದುರ್ಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಕಾರ್ಯಕರ್ತೆಯರು ತೃತೀಯ ಲಿಂಗಿಗಳಿಗೆ ಬಾಗಿನ ಅರ್ಪಿಸುತ್ತಿರುವುದು   

ಚಿತ್ರದುರ್ಗ: ಬಿಜೆಪಿ ಮಹಿಳಾ ಜಿಲ್ಲಾ ಘಟಕದ ಕಾರ್ಯಕರ್ತೆಯರು ಗುರುವಾರ ತೃತೀಯ ಲಿಂಗಿಗಳಿಗೆ ಬಾಗಿನ ಸಮರ್ಪಿಸಿದರು.

ಪಕ್ಷದ ಜಿಲ್ಲಾ ಘಟಕದ ಕಚೇರಿ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳು ಬಹು ಉತ್ಸಾಹದಿಂದಲೇ ಭಾಗವಹಿಸಿದ್ದರು.

ಕಾಯಕದ ಮಹತ್ವಕ್ಕೆ ಹೆಚ್ಚು ಒತ್ತು ನೀಡಿ ದುಡಿದು ಬದುಕುವುದನ್ನು ಮೈಗೂಡಿಸಿಕೊಂಡರೆ ಯಾರೂ ನಿಮ್ಮನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

ADVERTISEMENT

‘ತೃತೀಯ ಲಿಂಗಿಗಳಿಗೆ ಭಿಕ್ಷಾಟನೆ ಎಂಬುದು ಮುಖ್ಯ ವೃತ್ತಿಯಲ್ಲ. ಜೀವನಕ್ಕೆ ಪರ್ಯಾಯ ಮಾರ್ಗವೂ ಅಲ್ಲ. ಸ್ವ-ಉದ್ಯೋಗ ಮಾಡಲು ಇಚ್ಛಿಸಿದರೆ ತರಬೇತಿ ಜತೆಗೆ ಸಾಲ ಮತ್ತು ಮೂಲಸೌಲಭ್ಯ ಸರ್ಕಾರದಿಂದ ಒದಗಿಸುತ್ತೇವೆ’ ಎಂದ ಅವರು, ‘ವಸತಿ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿದ್ದೀರಿ. ಪಟ್ಟಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿ. ಸೂಕ್ತ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

‘ತೃತೀಯ ಲಿಂಗಿಗಳಿಗೆ ಉತ್ತಮ ಪ್ರಶಸ್ತಿ ನೀಡಿ ಗೌರವಿಸುವುದರ ಜತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಬಿಜೆಪಿ ನೇತೃತ್ವದ ಸರ್ಕಾರ ಮಾಡುತ್ತಿದೆ. ಬಾಗಿನ ಅರ್ಪಿಸುವುದು ಕೂಡ ಇದರ ಒಂದು ಭಾಗ. ಎಲ್ಲಾ ವರ್ಗಕ್ಕೂ ಸಮಾನತೆ ಸಿಗಬೇಕು ಎಂಬುದು ಪಕ್ಷದ ಧ್ಯೇಯವಾಗಿದೆ’ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಮುಖಂಡರಾದ ರಾಜೇಶ್ ಬುರುಡೆಕಟ್ಟೆ, ಜೈಪಾಲ್, ಸುರೇಶ್ ಸಿದ್ದಾಪುರ, ಶೈಲಜಾರೆಡ್ಡಿ, ಡಾ.ಸಿದ್ದಾರ್ಥ ಗುಂಡಾರ್ಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.