ADVERTISEMENT

ಬಿಜೆಪಿ ಹೆಮ್ಮರವಾಗಿದೆ: ಮತ್ತಷ್ಟು ಬಲಪಡಿಸಿ

ಪ್ರಶಿಕ್ಷಣ ವರ್ಗ ಕಾರ್ಯಾಗಾರದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 4:49 IST
Last Updated 10 ಜನವರಿ 2021, 4:49 IST
ಚಿತ್ರದುರ್ಗದಲ್ಲಿ ಶನಿವಾರ ನಡೆದ ಬಿಜೆಪಿ ಗ್ರಾಮಾಂತರ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿದರು
ಚಿತ್ರದುರ್ಗದಲ್ಲಿ ಶನಿವಾರ ನಡೆದ ಬಿಜೆಪಿ ಗ್ರಾಮಾಂತರ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿದರು   

ಚಿತ್ರದುರ್ಗ: ‘ದೇಶದೊಳಗೆ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಆದರೂ ಮತ್ತಷ್ಟು ಬಲಪಡಿಸಬೇಕಾದ ಜವಾಬ್ದಾರಿ ಪಕ್ಷದಲ್ಲಿರುವ ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಲಹೆ ನೀಡಿದರು.

ಬಿಜೆಪಿ ಗ್ರಾಮಾಂತರ ಮಂಡಲದಿಂದ ಹೊರವಲಯದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಬಿಜೆಪಿಗೆ ದೇಶ ಮುಖ್ಯವೇ ಹೊರತು ಅಧಿಕಾರವಲ್ಲ. ಆದರೆ, ಸ್ವಾತಂತ್ರ್ಯಾ ನಂತರ ಒಂದು ಮನೆತನಕ್ಕೆ ಸೀಮಿತವಾಗಿರುವ ಕಾಂಗ್ರೆಸ್‌ಗೆ ಅಧಿಕಾರ ಇಲ್ಲದಿರುವುದೇ ದೊಡ್ಡ ಚಿಂತೆಯಾಗಿದೆ. ಹೀಗಾಗಿ, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಕಾಲ ಕಳೆಯುತ್ತಿದ್ದಾರೆ. ನಮಗೂ ಅವರಿಗೂ ಇರುವಂತಹ ಅಜಗಜಾಂತರ ವ್ಯತ್ಯಾಸವಿದು’ ಎಂದರು.

ADVERTISEMENT

‘ಸ್ವಾತಂತ್ರ ಪಡೆಯಲು ಸ್ಥಾಪನೆಗೊಂಡ ಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಲು ಪಕ್ಷವಾಗಿ ಪರಿವರ್ತನೆಯಾಯಿತು. ಆದರೆ, ಆ ಪಕ್ಷಕ್ಕೀಗ ದೇಶದ ಜನರು ಮನ್ನಣೆ ನೀಡುತ್ತಿಲ್ಲ. ಪ್ರಸ್ತುತ ಬಿಜೆಪಿಯತ್ತ ಜನರ ಒಲವು ಹೆಚ್ಚುತ್ತಿದೆ. ಇಂತಹ ಉತ್ತಮ ಸಂದರ್ಭದಲ್ಲಿ ಬಿಜೆಪಿಯ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

‘ಶ್ಯಾಂಪ್ರಸಾದ್ ಮುಖರ್ಜಿ, ದೀನ್‌ ದಯಾಳ್ ಉಪಾಧ್ಯಾಯ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ, ಮಾಜಿ ಉಪಪ್ರಧಾನಿ ಆಡ್ವಾಣಿ ಅವರು ಸಾವಿರಾರು ಕಿ.ಮೀ. ನಡೆದಾಡಿ ಸಂಘಟಿಸಿದ್ದಾರೆ. ಅನೇಕ ಹಿರಿಯರ ತ್ಯಾಗ, ಬಲಿದಾನ, ತತ್ವ-ಸಿದ್ಧಾಂತಗಳ ಮೇಲೆ ಪಕ್ಷ ನಿಂತಿದೆ. ಪ್ರಧಾನಿ ಮೋದಿ ಅವರು ಆಕ್ರಮಿತ ಕಾಶ್ಮೀರ ಪ್ರದೇಶವನ್ನು ವಶಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ. ಇಂತಹ ಪಕ್ಷದಲ್ಲಿರುವುದೇ ಹೆಮ್ಮೆಯ ಸಂಗತಿ ಅಂದುಕೊಂಡು ಪಕ್ಷಕ್ಕಾಗಿ ದುಡಿಯೋಣ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ‘ಪಕ್ಷದ ನಾಯಕರು ತಿಳಿಸುವ ವಿಚಾರಗಳನ್ನು ಬೂತ್‌ಮಟ್ಟಕ್ಕೆ ತಲುಪಿಸುವುದೇ ಪ್ರಶಿಕ್ಷಣ ವರ್ಗದ ಉದ್ದೇಶ. ಈ ಪ್ರಕ್ರಿಯೆ ಬೇರೆ ಪಕ್ಷಗಳಲ್ಲಿ ನಡೆಯುವುದಿಲ್ಲ. ಪಕ್ಷ ಸಂಘಟನೆಗಾಗಿ ಕಾರ್ಯಕರ್ತರು ಸಮಯ ಮೀಸಲಿಡಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಎಂ.ಸುರೇಶ್, ನಂದಿ ನಾಗರಾಜ್, ಸಿದ್ದೇಶ್ ಯಾದವ್, ಕಲ್ಲಂ ಸೀತಾರಾಮರೆಡ್ಡಿ, ಭೀಮಸಮುದ್ರದ ಅನಿತ್, ವೀರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಟಿ.ಗುರುಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.