ADVERTISEMENT

ಬೆಲೆ ಏರಿಕೆಯೇ ಬಿಜೆಪಿ ಸಾಧನೆ: ರಣದೀಪ್ ಸುರ್ಜೇವಾಲ ಆರೋಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 6:00 IST
Last Updated 9 ಅಕ್ಟೋಬರ್ 2022, 6:00 IST
ಹಿರಿಯೂರಿನಲ್ಲಿ ಶನಿವಾರ ಭಾರತ್ ಜೋಡೊ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದರು.
ಹಿರಿಯೂರಿನಲ್ಲಿ ಶನಿವಾರ ಭಾರತ್ ಜೋಡೊ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದರು.   

ಹಿರಿಯೂರು: ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಡುಗೆ ಅನಿಲದ ಬೆಲೆ ₹ 400 ಇತ್ತು.ಬಿಜೆಪಿ ಅಧಿಕಾರಕ್ಕೆ ಬಂದ ನಂತರ ₹ 1,100 ಆಗಿದೆ. ನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಹೆಚ್ಚಿದೆ. ಇದನ್ನು ಜನರಿಗೆ ತಿಳಿಸಲು ಭಾರತ್ ಜೋಡೊ ಯಾತ್ರೆ ಆರಂಭಿಸಿದ್ದೇವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಭಾರತ್ ಜೋಡೊಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಯಾತ್ರೆ ಚುನಾವಣೆ ಗಿಮಿಕ್ ಅಲ್ಲ. ಗಿಮಿಕ್ ಮಾಡುವುದು, ಕೋಮು ಭಾವನೆ ಕೆರಳಿಸುವುದು ಬಿಜೆಪಿಯವರಿಗೆ ಅಂಟಿರುವ ಜಾಢ್ಯ. ಕೇವಲ 9 ಜನರನ್ನು ಮತ್ತಷ್ಟು ಹಣವಂತರನ್ನಾಗಿಸಲು ಮೋದಿ ಸರ್ಕಾರ ಇರಬೇಕೆ? ಬಡವರು ಬೆಲೆ ಏರಿಕೆ ತುಳಿತಕ್ಕೆ ಸಿಕ್ಕಿ ನಲುಗುತ್ತಿದ್ದರೆ, ಅಂಬಾನಿ, ಆದಾನಿಯಂತಹವರು ಸುಖದ ಸುಪ್ಪತ್ತಿಗೆ ಮೇಲೆ ತೇಲುತ್ತಿದ್ದಾರೆ. ಸಾರ್ವಜನಿಕ ಉದ್ಯಮಗಳನ್ನು ಒಂದೊಂದಾಗಿ ಮುಚ್ಚುವ ಮೂಲಕ ದೇಶವನ್ನು ಖಾಸಗೀಕರಣದ ಸುಳಿಗೆ ಸಿಲುಕಿಸುವ ಹುನ್ನಾರ ನಡೆದಿದೆ’ ಎಂದು ದೂರಿದರು.

ADVERTISEMENT

‘ವೈದ್ಯಕೀಯ ಪದವಿ ಬಡವರಿಗೆ ಗಗನ ಕುಸುಮವಾಗಿದೆ. ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿದ್ದಾಗ ಎಸ್‌ಐ ನೇಮಕಾತಿ ಹಗರಣ ನಡೆದಿತ್ತು. ಮುಖ್ಯಮಂತ್ರಿ ವಿರುದ್ಧ ಪ್ರಧಾನಿ ತನಿಖೆ ನಡೆಸಲು ಸಿದ್ಧರಿದ್ದಾರೆಯೇ’ ಎಂದು ಪ್ರಶ್ನಿಸಿದರು.

ಮುಖಂಡರಾದ ಸಲೀಂ ಅಹಮ್ಮದ್, ಧ್ರುವ ನಾರಾಯಣ, ಡಿ. ಸುಧಾಕರ್, ಎಚ್. ಆಂಜನೇಯ, ಟಿ. ರಘುಮೂರ್ತಿ ಬಿ.ಜಿ. ಗೋವಿಂದಪ್ಪ, ಎಚ್.ಎಂ. ರೇವಣ್ಣ, ಬಿ.ಎನ್. ಚಂದ್ರಪ್ಪ, ಎಂ.ಕೆ. ತಾಜ್ ಪೀರ್, ಜಿ.ಎಸ್. ಮಂಜುನಾಥ್, ನೇರ್ಲಗುಂಟೆ ತಿಪ್ಪೇಸ್ವಾಮಿ, ಹನುಮಲಿ ಷಣ್ಮುಖಪ್ಪ, ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಯೋಗೇಶ್ ಬಾಬು, ಅಬ್ದುಲ್ ಜಬ್ಬರ್ ಸಾಬ್, ಜಯಮ್ಮ ಬಾಲರಾಜ್, ಹಾಲೇಶ್ ಕುಮಾರ್, ಗೀತಾನಂದಿನಿ ಗೌಡ, ಬಸವರಾಜ್, ಖಾದಿರಮೇಶ್, ಈರಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.