ಚಿತ್ರದುರ್ಗ: ‘ಸಿಜಿಕೆ ಅವರು 90ರ ದಶಕದಲ್ಲಿ ಬೀದಿ ನಾಟಕಗಳ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿ, ಅನೇಕ ಪ್ರತಿಭಾವಂತ ಕಲಾವಿದರನ್ನು ರಂಗಭೂಮಿ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದರು’ ಎಂದು ರಂಗ ವಿಮರ್ಶಕ ವಿ.ಬಸವರಾಜ ಹೇಳಿದರು.
ಬಾಪೂಜಿ ಸಭಾಂಗಣದಲ್ಲಿ ಗುರುವಾರ ರಂಗಸೌರಭ ಕಲಾ ಸಂಘ, ಕರ್ನಾಟಕ ರಂಗ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಬೀದಿರಂಗಭೂಮಿ ದಿನಾಚರಣೆ ಹಾಗೂ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮನುಷ್ಯನಿಗೆ ಜೀವಂತಿಕೆ ತಂದು ಕೊಡುವಂಥ ಶಕ್ತಿ ರಂಗ ಚಟುವಟಿಕೆಗಳಿಗೆ ಇದೆ. ಅದನ್ನು ನಾವು ಸಿಜಿಕೆ ಅವರ ನಾಟಕಗಳಲ್ಲಿ ಕಾಣಬಹುದು. ದಲಿತ ಹೋರಾಟದ ಮೂಲಕ ಮುನ್ನಲೆಗೆ ಬಂದ ಅವರು, ಯಾರಿಗೂ ಬೇಡವಾದ ಚಿಂತನೆಗಳನ್ನು ಮುಖ್ಯವಾಹಿನಿಗೆ ತಂದರು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಅವರ ಖ್ಯಾತಿ ವ್ಯಾಪಿಸಿತು’ ಎಂದರು.
ಚಳ್ಳಕೆರೆಯ ಎಚ್ಪಿಸಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕೆ.ಚಿತ್ತಯ್ಯ, ‘ಸಿಜಿಕೆ ಹೊಸ ಚಿಂತನೆ, ಆಲೋಚನೆಗಳ ಮೂಲಕ ರಂಗಭೂಮಿಗೆ ಹೊಸ ಆಯಾಮ ನೀಡಿದರು’ ಎಂದರು.
ಇದೇ ಸಂದರ್ಭದಲ್ಲಿ ಚಳ್ಳಕೆರೆಯ ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಮಿ ಅವರಿಗೆ ಸಿಜಿಕೆ ರಂಗ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ರಂಗಕರ್ಮಿ ಕೆಪಿಎಂ ಗಣೇಶಯ್ಯ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವಿರೇಶ್. ಬಾಪೂಜಿ ದೂರ ಶಿಕ್ಷಣ ಸಂಯೋಜಕ ಎಂ.ರುದ್ರಪ್ಪ, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಕೆಪಿಎಂ ಸಧ್ಯೋಜಾತಯ್ಯ, ಪ್ರಾಚಾರ್ಯ ಕೆ.ಜಂಬುನಾಥ್, ರಂಗಭೂಮಿ ಕಲಾವಿದ ಮಲ್ಲಪ್ಪನಹಳ್ಳಿ ಮಹಲಿಂಗಯ್ಯ, ಶ್ರೀನಿವಾಸ್ ಮಳಲಿ, ಎಂ.ಕೆ.ಹರೀಶ್, ಶ್ರೀಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.