ADVERTISEMENT

ಐದು ವರ್ಷ ಮುಖ್ಯಮಂತ್ರಿ | ಸಿದ್ದರಾಮಯ್ಯ ಅಭಿಪ್ರಾಯಕ್ಕೆ ಸಹಮತ: ಸಂತೋಷ್ ಲಾಡ್‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 13:53 IST
Last Updated 3 ನವೆಂಬರ್ 2023, 13:53 IST
ಸಂತೋಷ್ ಲಾಡ್‌
ಸಂತೋಷ್ ಲಾಡ್‌   

ಚಿತ್ರದುರ್ಗ: ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬುದಾಗಿ ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಪೂರ್ಣ ಸಮ್ಮತಿ ಹಾಗೂ ಸಹಮತ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

‘ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಮಾತ್ರವೇ ಮುಖ್ಯಮಂತ್ರಿ ಎಂಬ ವದಂತಿಗೆ ತೆರೆಬಿದ್ದಿದೆ. ಪಕ್ಷ ನಿರ್ಧಾರ ಮಾಡಿದರೆ ಮಾತ್ರ ಮುಖ್ಯಮಂತ್ರಿ ಬದಲಾವಣೆ ಸಾಧ್ಯ. ಹೈಕಮಾಂಡ್‌ ಇಂತಹ ತೀರ್ಮಾನ ಮಾಡಿದರೆ ಮುಂದೆ ನೋಡೋಣ’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸರ್ಕಾರ ಅಧಿಕಾರಕ್ಕೆ ಬಂದು ಸಂಪುಟ ರಚನೆಯಾಗಿದೆ. ಎರಡೂವರೆ ವರ್ಷಕ್ಕೆ ಇದು ಬದಲಾಗುತ್ತದೆ ಎಂಬ ಗಾಳಿಮಾತು ಹರಿದಾಡುತ್ತಿದೆ. ಸಚಿವ ಸಂಪುಟ ಪುನರ್‌ ರಚನೆ ಹಾಗೂ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ವಿಚಾರಗಳನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ, ಕೆಲವರು ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ ಅಷ್ಟೇ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐ ಬಳಸಿಕೊಂಡು ಸರ್ಕಾರ ಕೆಡವುದನ್ನು ಬಿಜೆಪಿ ಹವ್ಯಾಸ ಮಾಡಿಕೊಂಡಿದೆ. ಅಧಿಕಾರದಲ್ಲಿರುವ ಪಕ್ಷದ ನಾಯಕರನ್ನು ಮಾನಸಿಕವಾಗಿ ಕುಗ್ಗಿಸುವ ಹುನ್ನಾರಗಳು ನಡೆಯುತ್ತಿವೆ. ಸರ್ಕಾರ ಬೀಳಿಸುವ ಹುನ್ನಾರಕ್ಕೆ ಸಂಬಂಧಿಸಿದ ಕೆಲ ವದಂತಿಗಳು ನನ್ನ ಕಿವಿಗೂ ಬಿದ್ದಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.