ಚಿಕ್ಕಜಾಜೂರು: ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಓದುವ ಹಾಗೂ ಬರೆಯುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ಮಕ್ಕಳ ಭೌದ್ಧಿಕ ಜ್ಞಾನ ಮಟ್ಟ ಹೆಚ್ಚಾಗುತ್ತದೆ. ದಿನಪತ್ರಿಕೆಗಳನ್ನು ಓದುವುದರಿಂದ ಮುಂದಿನ ಕಲಿಕೆಗೆ ಅನುಕೂಲವಾಗುತ್ತದೆ ಎಂದು ಪಿಡಿಒ ಶಶಿಕುಮಾರ್ ತಿಳಿಸಿದರು.
ಸಮೀಪದ ಚಿಕ್ಕಎಮ್ಮಿಗನೂರು ಗ್ರಾಮ ಪಂಚಾಯಿತಿ ಗ್ರಂಥಾಲಯದ ವತಿಯಿಂದ ಶನಿವಾರ ಮುಕ್ತಾಯಗೊಂಡ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದಲ್ಲಿ ಮೇ 19ರಿಂದ ಬೇಸಿಗೆ ಶಿಬಿರ ನಡೆಸಲಾಗಿತ್ತು. ಶಿಬಿರದಲ್ಲಿ ಗ್ರಾಮದ 8ರಿಂದ 13 ವರ್ಷದ 40 ಶಾಲಾ ಮಕ್ಕಳು ಭಾಗವಹಿಸಿದ್ದರು. ಗ್ರಂಥಾಲಯ ಮೇಲ್ವಿಚಾರಕ ಆಂಜಿನಪ್ಪ ಮಕ್ಕಳಿಗೆ ಪ್ರತಿ ನಿತ್ಯ ಪೇಪರ್ನಲ್ಲಿ ದೋಣಿ, ಚಿಟ್ಟೆ ಮಾಡುವ ತರಬೇತಿ ನೀಡಿಸರು. ಅಲ್ಲದೇ ಗ್ರಂಥಾಲಯದ ಆವರಣದಲ್ಲಿ ಗ್ರಾಮೀಣ ಕ್ರೀಡೆಗಳಾದ ಚಿನ್ನಿ ದಾಂಡು, ಕಬಡ್ಡಿ, ಕೊಕ್ಕೊ, ಚೆಸ್ ಆಡುವುದನ್ನು ಕಲಿಸಲಾಯಿತು. ಮಕ್ಕಳಿಂದಲೇ ಕಥೆ ಹೇಳಿಸುವುದು, ಪ್ರಜಾವಾಣಿ, ವಿಜಯವಾಣಿ, ವಿದ್ಯಾರ್ಥಿ ಮಿತ್ರ, ಸುಧಾ, ಮಯೂರ ಮೊದಲಾದ ಪತ್ರಿಕೆಗಳನ್ನು ಓದಿಸಲಾಯಿತು. ಗ್ರಂಥಾಲಯದಲ್ಲಿ ಸಿಗುವ ಕಥೆ, ಕಾದಂಬರಿ ಪುಸ್ತಕಗಳನ್ನು ಓದುವುದರಿಂದ ಆಗುವ ಅನುಕೂಲದ ಬಗ್ಗೆ ತಿಳಿಸಿಕೊಡಲಾಯಿತು. ಹೊರ ಸಂಚಾರಕ್ಕೆ ಕರೆದೊಯ್ದು ಪ್ರಕೃತಿಯ ಬಗ್ಗೆಯೂ ಮಾಹಿತಿ ನೀಡಲಾಯಿತು ಎಂದು ಅವರು ವಿವರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಮ್ಮ, ಕಾರ್ಯದರ್ಶಿ ಓಬಳೇಶ್, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.