ADVERTISEMENT

ಚಿತ್ರದುರ್ಗ | ಯೂರಿಯಾ ಕೊರತೆ; ಜೆ.ಡಿ ಕಚೇರಿಗೆ ಮುತ್ತಿಗೆ

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ, ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 5:35 IST
Last Updated 23 ಜುಲೈ 2025, 5:35 IST
ಯೂರಿಯಾ ಕೊರತೆ ನಿವಾರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ರೈತರು ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು
ಯೂರಿಯಾ ಕೊರತೆ ನಿವಾರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ರೈತರು ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು   

ಚಿತ್ರದುರ್ಗ: ಮುಂಗಾರು ಬಿತ್ತನೆಗೆ ಯೂರಿಯಾ ದೊರೆಯುತ್ತಿಲ್ಲ, ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗುತ್ತಿದೆ ಎಂದು ಆರೋಪಿಸಿ ರೈತರು ಮಂಗಳವಾರ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿತ್ತನೆ ಅವಧಿಯಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಹಲವು ಬಾರಿ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸೊಸೈಟಿಗಳಿಗೆ ಗೊಬ್ಬರ ಸರಬರಾಜು ಮಾಡುವ ಬದಲು ಅಂಗಡಿಗಳಿಗೆ ಗೊಬ್ಬರ ನೀಡಲಾಗುತ್ತಿದೆ. ಅಂಗಡಿ ಮಾಲೀಕರು ಬಡ ರೈತರಿಂದ ಹೆಚ್ಚಿಗೆ ದರ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ನಗರದ ಉದಯ ಫರ್ಟಿಲೈಸರ್‌, ಕಾವೇರಿ ಫರ್ಟಿಲೈಸರ್‌ ಅಂಗಡಿಯವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಅಲ್ಲಿಯ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ನಾವು ದೂರು ಕೊಟ್ಟ ನಂತರವಷ್ಟೇ ಅಲ್ಲಿಗೆ ದಾಳಿ ಮಾಡಿದ್ದಾರೆ. ಇಂತಹ ನೂರಾರು ಅಂಗಡಿಗಳು ರೈತರಿಗೆ ಮೋಸ ಮಾಡುತ್ತಿದ್ದರೂ ಅಧಿಕಾರಿಗಳು ಕಡಿವಾಣ ಹಾಕಿಲ್ಲ’ ಎಂದು ಆರೋಪಿಸಿದರು.

ADVERTISEMENT

‘₹ 190– ₹ 200 ಇರುವ ಒಂದು ಚೀಲ ಯೂರಿಯಾಗೆ ₹ 350– 400 ವಸೂಲಿ ಮಾಡುತ್ತಿದ್ದಾರೆ. ಒಬ್ಬ ರೈತನಿಗೆ ಕೇವಲ 2 ಚೀಲ ನೀಡುತ್ತಿದ್ದಾರೆ. ಆದರೆ, ₹ 400 ದರ ನೀಡಿದರೆ ಎಷ್ಟು ಬೇಕಾದರೂ ಕೊಡುತ್ತಾರೆ. ಇಂತಹ ಅಕ್ರಮದಿಂದ ಬಡ ರೈತರು ಯೂರಿಯಾ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆ ಬಂದು ರೈತರು ಭೂಮಿಯನ್ನು ಹಸನು ಮಾಡಿಕೊಂಡು ಗೊಬ್ಬರಕ್ಕಾಗಿ ಹೆಣಗಾಡುವ ಪರಿಸ್ಥಿತಿ ಇದೆ. ಖಾಸಗಿಯಾಗಿ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದು, ಗೋದಾಮುಗಳಲ್ಲಿ ಗೊಬ್ಬರ ದಾಸ್ತಾನು ಇದ್ದರೂ ಇಲ್ಲ ಎಂದು ಹೇಳುತ್ತಿದ್ದಾರೆ. ಅವರ ವಿರುದ್ಧ ಅಧಿಕಾರಿಗಳು ಕ್ರಮ ಜರುಗಿಸಲು ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮ ಜಿಲ್ಲೆಗೆ 26,643 ಮೆಟ್ರಿಕ್‌ ಟನ್‌ ರಸಗೊಬ್ಬರದ ಬೇಡಿಕೆ ಇತ್ತು. ಇಲ್ಲಿಯವರೆಗೆ 22,856 ಮೆಟ್ರಿಕ್‌ ಟನ್‌ ಪೂರೈಕೆಯಾಗಿದೆ. ಇನ್ನೂ 3,000 ಮೆಟ್ರಿನ್‌ ಬೇಡಿಕೆ ಇದೆ. ಸದ್ಯಕ್ಕೆ ಬೇರೆ ಜಿಲ್ಲೆಯಿಂದ 300 ಮೆಟ್ರಿಕ್‌ ತರಿಸಲಾಗಿದೆ. ಜೊತೆಗೆ ಸ್ಪಿಕ್‌ ಕಂಪನಿಯಿಂದಲೂ ಗೊಬ್ಬರ ಬರಲಿದೆ. ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್‌ ಹೇಳಿದರು.

ಪ್ರತಿಭಟನೆಯಲ್ಲಿ ರೈತರಾದ ಶಂಕರಪ್ಪ, ರಮೇಶ್‌, ರವೀಂದ್ರ, ಟಿ.ರಾಮೇಶ್ವರಪ್ಪ, ಶಿವಮೂರ್ತಿ, ಟಿ.ರಾಘವೇಂದ್ರ, ಮಲ್ಲಿಕಾರ್ಜುನ್‌ ಇದ್ದರು.

ಮಳೆ ಬಂದರೂ ಬಾರದ ರಸಗೊಬ್ಬರ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ | ಖಾಸಗಿಯವರಿಗೆ ಮಣಿಯುತ್ತಿರುವ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.