ಹಿರಿಯೂರು: ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಮಂಗಳವಾರ ರಾತ್ರಿ ಆರ್ಯವೈಶ್ಯ ಮಂಡಳಿ ಸಹಯೋಗದಲ್ಲಿ ವಾಸವಿ ದೀಕ್ಷಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಿಶೇಷ ತಿಂಡಿಮೇಳ ಗಮನ ಸೆಳೆಯಿತು.
ತಿಂಡಿ ಪ್ರಿಯರು ಬಗೆಬಗೆಯ ಖಾದ್ಯಗಳನ್ನು ಸವಿದು ಆನಂದಿಸಿದರು.
‘ಅಡುಗೆ ಮಾಡುವುದು ಒಂದು ಕಲೆ. ರುಚಿಕಟ್ಟಾದ ಅಡುಗೆ ತಯಾರಿಸುವಲ್ಲಿ ಪುರುಷರದ್ದೇ ಪಾರುಪತ್ಯ ಎಂಬುದು ನಳಮಹಾರಾಜ, ಭೀಮಸೇನರಿಂದ ತಿಳಿದು ಬಂದಿದೆ. ಈಚೆಗೆ ಸಿದ್ಧಪಡಿಸಿದ ಆಹಾರದತ್ತ ಒಲವು ತೋರುತ್ತಿರುವ ಯುವ ಪೀಳಿಗೆ ಅಡುಗೆ ಮನೆಯ ಸಂಪರ್ಕ ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಸಿದ್ಧಪಡಿಸಿದ ಆಹಾರ ಸೇವನೆ ಅಪಾಯಕಾರಿ. ಕಷ್ಟ ಎನಿಸಿದರೂ ಮನೆಯಲ್ಲಿಯೇ ಶುಚಿ–ರುಚಿಯಾಗಿ ಅಡುಗೆ ತಯಾರಿಸಿ ತಿನ್ನುವ ಖುಷಿಯೇ ಬೇರೆ. ಹಿರಿಯರು ಕಿರಿಯರಿಗೆ ಅಡುಗೆ ತಯಾರಿ ಬಗ್ಗೆ ಹೇಳಿಕೊಡಬೇಕು’ ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಚ್.ಎಸ್. ನಾಗರಾಜ ಗುಪ್ತ ಸಲಹೆ ನೀಡಿದರು.
ಬಾಯಿಗೆ ರುಚಿ ನೀಡುವ ಪದಾರ್ಥಗಳಿಗಿಂತ ದೇಹದ ಆರೋಗ್ಯ ಸಂರಕ್ಷಣೆ ಮಾಡುವ ಸಿರಿಧಾನ್ಯದಂತಹ ಪದಾರ್ಥಗಳನ್ನು ಬಳಸಿ ಅಡುಗೆ ತಯಾರಿಸುವ ಬಗ್ಗೆ ಯುವ ಪೀಳಿಗೆಯವರಿಗೆ ತರಬೇತಿ ನೀಡಬೇಕಿದೆ ಎಂದರು.
ವಾಸವಿ ದೇವಿ, ಅನ್ನಪೂರ್ಣೇಶ್ವರಿ ದೇವಿ, ನಳಮಹಾರಾಜ, ಘಟೋದ್ಗಜ ವೇಷಧಾರಿಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.