ADVERTISEMENT

ಚಿತ್ರದುರ್ಗ | ಅರಣ್ಯ ಪ್ರದೇಶ; ಗಡಿ ಗುರುತಿಸಲು ಸೂಚನೆ

ಜಿಲ್ಲಾ ಮಟ್ಟದ ಸಮಿತಿ ಸಭೆ; ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:46 IST
Last Updated 12 ಆಗಸ್ಟ್ 2025, 7:46 IST
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅರಣ್ಯ ಭೂಮಿಗಳ ಕ್ರೂಡೀಕೃತ ದಾಖಲೆ ಸಿದ್ಧಪಡಿಸುವ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿದರು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅರಣ್ಯ ಭೂಮಿಗಳ ಕ್ರೂಡೀಕೃತ ದಾಖಲೆ ಸಿದ್ಧಪಡಿಸುವ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿದರು   

ಚಿತ್ರದುರ್ಗ: 'ಅಧಿಸೂಚಿತ ಅರಣ್ಯ ಪ್ರದೇಶಗಳ ದಾಖಲೆಗಳು ಸ್ಪಷ್ಟವಾಗಿದ್ದು ಬಹುಪಾಲು ಪ್ರದೇಶಗಳ ಗಡಿ ರೇಖೆ ಗುರುತಿಸಲಾಗಿದೆ. ಆದರೂ ಗೊಂದಲವಿರುವ ಕೆಲವು ಕಡೆ ತಹಶೀಲ್ದಾರ್‌ಗಳು, ವಲಯ ಅರಣ್ಯಾಧಿಕಾರಿಗಳು ಜಂಟಿ ಮೋಜಿಣಿ ನಡೆಸಿ ಗಡಿ ಗುರುತಿಸಬೇಕು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅರಣ್ಯ ಭೂಮಿಗಳ ಕ್ರೂಢೀಕೃತ ದಾಖಲೆ ಸಿದ್ಧಪಡಿಸುವ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪರಿಭಾವಿತ ಅರಣ್ಯ ಪ್ರದೇಶಗಳ ಪಟ್ಟಿಯನ್ನು ಪರಿಶೀಲಿಸಿ ಮಾನದಂಡಗಳನ್ವಯ ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಬೇಕು. ವರದಿ ಸಲ್ಲಿಸಲು ಜಂಟಿ ಪರಿಶೀಲನಾ ಸಮಿತಿ ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡ ರಚಿಸಬೇಕು. ಅರಣ್ಯ ಭೂಮಿಗಳ ಕ್ರೂಡೀಕೃತ ದಾಖಲೆ ಸಂಬಂಧ ಸರ್ವೆ ಕಾರ್ಯ ನಡೆಸಲು ಷೆಡ್ಯೂಲ್ ಪ್ರಕಾರ ಸಮಯ ನಿಗದಿಪಡಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಆಕಾಶ್ ಮಾತನಾಡಿ ‘ಪರಿಭಾವಿತ ಅರಣ್ಯ ಭೂಮಿಗಳ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿಗಾಗಿ ಎಲ್ಲಾ ತಾಲ್ಲೂಕು ಪಂಚಾಯಿತಿ ಇಒ, ಪಿಡಿಒಗಳಿಗೆ ನಿರ್ದೇಶನ ನೀಡಲಾಗುವುದು’ ಎಂದರು.

ADVERTISEMENT

ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯ ನಾಯ್ಕ್ ಮಾತನಾಡಿ ‘ವನ (ಸಂರಕ್ಷಣೆ ಮತ್ತು ಸಂವರ್ಧನೆ) ಅಧಿನಿಯಮ 1980 ಮತ್ತು ತಿದ್ದುಪಡಿ ಅಧಿನಿಯಮ 1988 ಮತ್ತು ನಿಯಮ 2023ರ ಅನುಸಾರ ದಾಖಲೆಗಳ ಕ್ರೂಡೀಕರಣಕ್ಕೆ ಸ್ಪಷ್ಟ ಆದೇಶಗಳಿವೆ. ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಅರಣ್ಯ ಭೂಮಿಗಳ ದಾಖಲೆಗಳನ್ನು ಸಿದ್ಧಪಡಿಸುವ ಸಲುವಾಗಿ ರಾಜ್ಯಮಟ್ಟದ ಸಮಿತಿ, ಕಂದಾಯ ವಿಭಾಗ ಮಟ್ಟದ ಸಮಿತಿ, ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ’ ಎಂದರು.

‘ಅಧಿಸೂಚಿತ ಮತ್ತು ಘೋಷಿತ ಅರಣ್ಯ ಪ್ರದೇಶಗಳು ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಎಂಬುದನ್ನು ಒಳಗೊಂಡಿರುತ್ತವೆ. ಕಾಯ್ದೆಯ ಕಲಮು (1)ರಲ್ಲಿ ಹೊರತುಪಡಿಸಿದ ಅರಣ್ಯಗಳು, ಅರಣ್ಯ ಗುಣಲಕ್ಷಣಗಳುಳ್ಳ ಪರಿಭಾವಿತ ಅರಣ್ಯ ಪ್ರದೇಶಗಳು ಎಂದು ಅರಣ್ಯ ಭೂ ದಾಖಲೆಗಳನ್ನು ವಗೀಕರಿಸಬೇಕಾಗಿದೆ. ಅರಣ್ಯ ಭೂಮಿಗಳನ್ನು ಗುರುತಿಸಿ ಕ್ರೂಡೀಕೃತ, ಏಕೀಕೃತ ದಾಖಲೆಗಳನ್ನು ವರ್ಗೀಕರಿಸಿ ಸಲ್ಲಿಸಲು ತಾಲ್ಲೂಕು ಮಟ್ಟದ ಜಂಟಿ ಪರಿಶೀಲನಾ ಸಮಿತಿಯನ್ನು ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳನ್ನು ರಚಿಸಲಾಗಿದೆ’ ಎಂದರು.

ಸಭೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ, ತೋಟಗಾರಿಕೆ ಉಪನಿರ್ದೇಶಕ ಶರಣ ಬಸಪ್ಪ ಬೋಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.