ADVERTISEMENT

ಚಿತ್ರದುರ್ಗ | ‘ಕಟ್ಟಡ ಕಾರ್ಮಿಕರ ನೂರಾರು ಕೋಟಿ ಲೂಟಿ’

ಸಿಬಿಐ ತನಿಖೆ, ಸಚಿವ ಸಂತೋಷ್‌ ಲಾಡ್‌ ರಾಜೀನಾಮೆಗೆ ಕೆ.ಎಸ್‌.ನವೀನ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 19:46 IST
Last Updated 21 ಜುಲೈ 2025, 19:46 IST
ಕೆ.ಎಸ್‌.ನವೀನ್‌
ಕೆ.ಎಸ್‌.ನವೀನ್‌   

ಚಿತ್ರದುರ್ಗ: ‘ಕಾರ್ಮಿಕರ ಆರೋಗ್ಯ ತಪಾಸಣೆ ನೆಪದಲ್ಲಿ ರಾಜ್ಯದಾದ್ಯಂತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣ ಲೂಟಿಯಾಗಿದೆ. ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ರಾಜೀನಾಮೆ ನೀಡಬೇಕು’ ಎಂದು ಮೇಲ್ಮನೆ ಸದಸ್ಯ, ಬಿಜೆಪಿಯ ಕೆ.ಎಸ್‌.ನವೀನ್‌ ಒತ್ತಾಯಿಸಿದರು.

‘ಎರಡು ವರ್ಷಗಳಲ್ಲಿ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ₹ 19 ಕೋಟಿ ಅವ್ಯವಹಾರ ನಡೆದಿದೆ. ನಡೆಸಲಾಗಿದೆ. 67,000 ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅಷ್ಟೊಂದು ಸಂಖ್ಯೆಯ ಕಾರ್ಮಿಕರೇ ಇಲ್ಲ. 13, 14 ವರ್ಷ ವಯಸ್ಸಿನ ಬಾಲಕರಿಗೂ ಸದಸ್ಯತ್ವ ನೀಡಿ ಬಾಲಕಾರ್ಮಿಕರನ್ನು ಸರ್ಕಾರವೇ ಸೃಷ್ಟಿ ಮಾಡಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ತುಮಕೂರು ಮೂಲದ ಆಯುರ್ವೇದ ಸಂಸ್ಥೆಗೆ ಆರೋಗ್ಯ ತಪಾಸಣೆ ಹೊಣೆ ನೀಡಲಾಗಿದೆ. ಪ್ರತಿ ಕಾರ್ಮಿಕರ ತಪಾಸಣೆಗೆ ₹ 2,999 ದರ ನಿಗದಿಪಡಿಸಲಾಗಿದೆ. ಇದು ಕೇಂದ್ರ ಸರ್ಕಾರ ನಿಗದಿ ಮಾಡಿರುವ ₹ 1,350ಕ್ಕೂ ಅಧಿಕ. ‘2023–24ರಲ್ಲಿ 33,500 ಕಾರ್ಮಿಕರು ನೋಂದಣಿಯಾಗಿದ್ದರೆ, 2024–25ನೇ ಸಾಲಿನಲ್ಲೂ ಅಷ್ಟೇ ಸಂಖ್ಯೆ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿರುವುದು ಶಂಕೆ ಮೂಡಿಸಿದೆ’ ಎಂದು ಹೇಳಿದರು. 

ADVERTISEMENT

‘₹ 50 ಮೌಲ್ಯದ ಕಬ್ಬಿಣಾಂಶದ ಮಾತ್ರೆಗಳಿಗೆ ₹ 600 ನೀಡಿದ್ದಾರೆ. ಕಟ್ಟಡ ಕಾರ್ಮಿಕರ ನಿಧಿ ಹಾಲು ಕರೆಯುವ ಹಸುವಿನಂತಿದ್ದು, ಸಂತೋಷ್‌ ಲಾಡ್‌ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಸಿಬಿಐ ತನಿಖೆಯಾದರೆ ಮಾತ್ರ ಸತ್ಯ ಹೊರಬರುತ್ತದೆ’ ಎಂದು ಹೇಳಿದರು.

‘ಇದನ್ನು ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇನೆ. ಪಕ್ಷದ ಮುಖಂಡರು ಎಲ್ಲ ಜಿಲ್ಲೆಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಸದನದಲ್ಲಿ ಹಗರಣದ ಒಟ್ಟಾರೆ ಮೌಲ್ಯವನ್ನು ತೆರೆದಿಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.