ಚಳ್ಳಕೆರೆ: ‘ಬೇಸಿಗೆ ಸಮಯದಲ್ಲಿ ಮಲೇರಿಯ ಸೇರಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಬೇಕು. ನಗರದ ಕೋಳಿ, ಮೀನು, ಮಾಂಸದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ನಗರಸಭೆ ಅಧ್ಯಕ್ಷೆ ಮಂಜುಳಾ ಆರ್.ಪ್ರಸನ್ನಕುಮಾರ್ ಅಂಗಡಿ ಮಾಲೀಕರಿಗೆ ಸಲಹೆ ನೀಡಿದರು.
ನಗರಸಭೆ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೋಳಿ, ಮೀನು ಮತ್ತು ಮಾಂಸದ ಅಂಗಡಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ಮೀನು, ಮಾಂಸ ತೊಳೆಯಲು ಶುದ್ಧ ನೀರನ್ನೇ ಬಳಸಬೇಕು. ಪ್ಲಾಸ್ಟಿಕ್, ಸೂಪರ್ ಚೀಲ ಬಳಕೆ ಮಾಡಬಾರದು ಎಂದು ಹೇಳಿದರು.
ಹಣದ ಆಸೆಗಾಗಿ ಕಳಪೆ ಮಾಂಸ ಮಾರಾಟ ಮಾಡಬಾರದು. ಚರ್ಮ, ಪುಕ್ಕ, ಮೂಳೆ ಮತ್ತು ಉಪಯೋಗಕ್ಕೆ ಬಾರದಿರುವ ಮಾಂಸವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸ್ವಚ್ಛತೆ ಕಡೆಗೆ ಗಮನರಿಸದ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ರೇವಣ್ಣ ಹೇಳಿದರು.
ಪರಿಸರ ಎಂಜಿನಿಯರ್ ನರೇಂದ್ರಬಾಬು ಮಾತನಾಡಿದರು. ಪೌರಾಯುಕ್ತ ಜಗರಡ್ಡಿ, ಉಪಾಧ್ಯಕ್ಷೆ ಸುಮಾ ಭರಮಯ್ಯ, ನಾಮನಿರ್ದೇಶಕ ಸದಸ್ಯ ಡಿ.ಕೆ.ಅನ್ವರ್ ಅಹ್ಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.