ಚಿತ್ರದುರ್ಗ: ತಿಮ್ಮಣ್ಣ ನಾಯಕನ ಕೆರೆ ಹಿಂಭಾಗದ ಐತಿಹಾಸಿಕ ಮಾವಿನತೋಪು ತಾಣವನ್ನು ಅತ್ಯಾಧುನಿಕ ಉದ್ಯಾನವಾಗಿ (ಟ್ರೀ ಪಾರ್ಕ್) ಅಭಿವೃದ್ಧಿಗೊಳಿಸುವ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ 26 ಎಕರೆಯಷ್ಟು ವಿಶಾಲ ಜಾಗ ಕಿಡಿಗೇಡಿಗಳಿಗೆ ಆಶ್ರಯವಾಣವಾಗಿದೆ.
ನಾಯಕ ಅರಸರ ಮೊದಲ ಪಾಳೇಗಾರ ಮತ್ತಿ ತಿಮ್ಮಣ್ಣನಾಯಕ ಕಟ್ಟಿಸಿದ ಕೆರೆಯು ಸುಂದರ ಪರಿಸರದ ನಡುವೆ ಅರಳಿದೆ. ಕೆರೆ ಹಿಂದಿನ ವಿಶಾಲ ಜಾಗದಲ್ಲಿ ನೂರಾರು ಮಾವಿನ ಮರಗಳಿದ್ದ ಕಾರಣ ಮಾವಿನತೋಪು ಎಂದೇ ಪ್ರಸಿದ್ಧಿ ಪಡೆದಿತ್ತು. ಅರಸರ ಕಾಲದಿಂದಲೂ ರುಚಿಕರ ಮಾವಿಹಣ್ಣುಗಳಿಗೆ ಆ ಜಾಗ ಹೆಸರುವಾಸಿಯಾಗಿತ್ತು. ಈಗ ಬೆರಳೆಣಿಕೆಯಷ್ಟು ಮಾವಿನಮರ ಉಳಿದಿದ್ದು ವಿಶಾಲ ಜಾಗದಲ್ಲಿ ಗಿಡಗಂಟಿಗಳು ಬೆಳೆದಿವೆ.
ಜೋಗಿಮಟ್ಟಿ ಅರಣ್ಯ, ಸುಂದರ ಕೆರೆ, ಕೋಟೆ ನಡುವೆ ಇರುವ ಈ ಜಾಗವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಯೋಜನೆ 2022ರಲ್ಲಿ ಸಿದ್ಧಗೊಂಡಿತ್ತು. ಅದಕ್ಕಾಗಿ ಆ ಜಾಗವನ್ನು ನಗರಸಭೆಯಿಂದ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ತೊಟಗಾರಿಕೆ ಇಲಾಖೆ ಸಚಿವರಾಗಿದ್ದ ಮುನಿರತ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದರು. ಆಗ ಶಾಸಕರಾಗಿದ್ದ ಜಿ.ಎಚ್.ತಿಪ್ಪಾರೆಡ್ಡಿ ಅವರು ₹ 9.50 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗೆ ಮಾವಿನತೋಪು ಮನರಂಜನಾ ಉದ್ಯಾನವಾಗಿ ರೂಪುಗೊಳ್ಳಬೇಕಾಗಿತ್ತು. ಪ್ರವಾಸಿಗರು ಪ್ರವೇಶ ದರ ಪಾವತಿಸಿ ಸುಂದರ ಉದ್ಯಾನದಲ್ಲಿ ವಿಹಾರ ಮಾಡಬೇಕಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಡೀ ಯೋಜನೆ ನನೆಗುದಿಗೆ ಬಿದ್ದಿದ್ದು ವಿಶಾಲ ಜಾಗ ಬಟಾಬಯಲಿನಂತಾಗಿದೆ. ತೋಟಗಾರಿಕೆ ಇಲಾಖೆ ಆ ಜಾಗವನ್ನು ನಿರ್ವಹಿಸಲು ಪರಿದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆ ಸಾಕಾರಗೊಂಡಿದ್ದರೆ ಹಣ್ಣಿನ ಗಿಡಗಳು, ಔಷಧೀಯ ಸದ್ಯೋದ್ಯಾನ, ಅತಿಥಿ ಗೃಹ, ಪ್ರವಾಸಿಗರಿಗಾಗಿ ವೀಕ್ಷಣಾ ಗೋಪುರ, ವಿಹಾರಿಗಳಿಗೆ ವಾಕಿಂಗ್ ಮಾರ್ಗ, ವಾಟರ್ ಪಾತ್, ಲಾನ್, ಕೆಆರ್ಎಸ್ ಬೃಂದಾವನ ಮಾದರಿಯ ಸಂಗೀತ ಕಾರಂಜಿ, ಮಕ್ಕಳ ಆಟಕ್ಕಾಗಿ ಆಟದ ಪಾರ್ಕ್, ಆಕರ್ಷಕ ಹೈಮಾಸ್ಟ್ ದೀಪ, ಸಾರ್ವಜನಿಕರಿಗೆ ತೆರೆದ ಜಿಮ್, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಬಯಲು ರಂಗಮಂದಿಗಳು ನಿರ್ಮಾಣಗೊಳ್ಳುತ್ತಿದ್ದವು. ಆದರೆ ಇಡೀ ಯೋಜನೆ ನೇಪಥ್ಯಕ್ಕೆ ಸರಿದಿರುವ ಕಾರಣ ಈಗ ಆ ಜಾಗ ಕಿಡಿಗೇಡಿಗಳ ತಾಣವಾಗಿದೆ.
ತೋಟಗಾರಿಕೆ ಇಲಾಖೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡ ನಂತರ ಅಲ್ಲಿ ₹ 15 ಲಕ್ಷ ವೆಚ್ಚ ಮಾಡಿ ಕೊಠಡಿಯೊಂದನ್ನು ನಿರ್ಮಿಸಿದೆ. ಜೊತೆಗೆ 1,200 ಸಸಿಗಳನ್ನು ನೆಟ್ಟಿದೆ. ವಿಶಾಲ ಜಾಗ ನಿರ್ವಹಣೆಗೆ ಕೇವಲ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿದೆ. 2 ಕೊಳವೆ ಬಾವಿಗಳಿದ್ದು ಅವರು ಸಸಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಕುಡುಕರ ಹಾವಳಿ ವಿಪರೀತವಾಗಿರುವ ಕಾರಣ ಸಿಬ್ಬಂದಿ ಅಪಾಯ ಸ್ಥಿತಿ ಎದುರಿಸುತ್ತಿದ್ದಾರೆ.
‘ಕಿಡಿಗೇಡಿಗಳು ಬೇಲಿಯನ್ನು ಹಾರಿ ಬಂದು ಮದ್ಯ ಸೇವನೆ ಮಾಡುತ್ತಾರೆ. ನಾವು ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಹಲ್ಲೆಗೆ ಬರುತ್ತಾರೆ. ಆದರೂ ಕಿಡಿಗೇಡಿಗಳ ಕಾಟದಿಂದ ಸಸಿಗಳನ್ನು ರಕ್ಷಣೆ ಮಾಡುತ್ತಿದ್ದೇವೆ’ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ಚಂದ್ರಪ್ಪ ಹೇಳಿದರು.
ಟ್ರೀ ಪಾರ್ಕ್ ಯೋಜನೆ ಸರ್ಕಾರದ ಹಂತದಲ್ಲಿ ಯಾವ ಸ್ಥಿತಿಯಲ್ಲಿದೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುವುದು. ನಮ್ಮ ವ್ಯಾಪ್ತಿಯಲ್ಲಿರುವ ಜಾಗದ ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು.– ಎಸ್.ಎಸ್. ಭೋಗಿ, ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ
ದಾರಿಯುದ್ದಕ್ಕೂ ಆತಂಕ...
ತಿಮ್ಮಣ್ಣ ನಾಯಕನ ಕೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದರೆ ಹಿಂಭಾಗದ ವಿಶಾಲ ಜಾಗ ತೋಟಗಾರಿಕೆ ಇಲಾಖೆ ಸುಪರ್ದಿಯಲ್ಲಿದೆ. ಜೋಗಿಮಟ್ಟಿ ರಸ್ತೆಯಿಂದ ಕೆರೆ ಪ್ರದೇಶಕ್ಕೆ ನೇರ ರಸ್ತೆ ಇದೆ. ಅರ್ಧ ಭಾಗಕ್ಕೆ ಡಾಂಬರ್ ಹಾಕಲಾಗಿದ್ದು ಸ್ವಲ್ಪದೂರ ಮಣ್ಣಿನ ರಸ್ತೆ ಇದೆ. ಜೋಗಿಮಟ್ಟಿ ರಸ್ತೆಯಿಂದ ಕೆರೆ ಕಡೆಗೆ ತಿರುವು ತೆಗೆದುಕೊಳ್ಳುತ್ತಿದ್ದಂತೆಯೇ ಸಾರ್ವಜನಿಕರಿಗೆ ಭಯ ಕಾಡುತ್ತದೆ. ರಸ್ತೆಯ ಎರಡೂ ಕಡೆ ಬೆಳೆದಿರುವ ಮುಳ್ಳಿನ ಗಿಡಗಳು ಎಲ್ಲೆಂದರಲ್ಲಿ ಮದ್ಯಸೇವನೆ ಮಾಡುತ್ತಾ ಇಸ್ಪೀಟ್ ಆಡುವ ಕಿಡಿಗೇಡಿಗಳಿಂದಾಗಿ ಜನರು ಆತಂಕ ಪಡುತ್ತಾರೆ.
‘ತಿಮ್ಮಣ್ಣ ನಾಯಕನ ಕೆರೆ ಸುತ್ತಮುತ್ತ ಕುಡುಕರ ಹಾವಳಿ ತಡೆಯುವಂತೆ ಪೊಲೀಸರಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿವರೆಗೂ ಮೊಬೈಲ್ ಬೆಳಕಿನಲ್ಲೇ ಕುಡಿಯುತ್ತಾ ಕುಳಿತುಕೊಳ್ಳುತ್ತಾರೆ’ ಎಂದು ಸಮೀಪದ ಜಟ್ಪಟ್ನಗರ ಸಿವಾಸಿ ಕೆ.ಪ್ರಕಾಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.