ADVERTISEMENT

ಚಿತ್ರದುರ್ಗ: ಕಾತ್ರಾಳು ಗುಡ್ಡದಲ್ಲಿ ಚುಂಚಶ್ರೀ ಚಾರಣ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 18:14 IST
Last Updated 17 ಆಗಸ್ಟ್ 2020, 18:14 IST
ಚಿತ್ರದುರ್ಗ ತಾಲ್ಲೂಕಿನ ಕಾತ್ರಾಳು ಗುಡ್ಡದಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ಚಾರಣ ನಡೆಸಿದರು. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಕಾತ್ರಾಳು ಗುಡ್ಡದಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ಚಾರಣ ನಡೆಸಿದರು. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದಾರೆ.   

ಚಿತ್ರದುರ್ಗ: ಹಸಿರು ಹೊದ್ದು ಮಲಗಿದ್ದ ಕಾತ್ರಾಳು ಗುಡ್ಡ. ಆಗಾಗ ಸೋನೆಯಂತೆ ಸುರಿಯುತ್ತಿದ್ದ ಮಳೆ. ಹುಲ್ಲು, ಎಲೆಗಳ ಮೇಲೆ ಕಾಯುತ್ತಿದ್ದ ನೀರ ಬಿಂದುಗಳಿಗೆ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಾದಸ್ಪರ್ಶವಾಗುತ್ತಿದ್ದಂತೆ ಇಡೀ ವಾತಾವರಣ ಬದಲಾಯಿತು. ಬರದ ನಾಡು ಮಲೆನಾಡನ್ನು ನೆನಪಿಸುವಂತೆ ಭಾಸವಾಯಿತು.

ಕಾತ್ರಾಳು ಸಮೀಪದ ಗೋಶಾಲೆಗೆ ಭೇಟಿ ನೀಡಿದ್ದ ಸ್ವಾಮೀಜಿ ಪರಿಮಳ ಜೈವಿಕ ಉದ್ಯಾನದಲ್ಲಿ ಸೋಮವಾರ ಚಾರಣ ನಡೆಸಿದರು. ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಚಾರಣಕ್ಕೆ ಸಾಥ್‌ ನೀಡಿದ್ದರು. ಎರಡೂವರೆ ಗಂಟೆಯಲ್ಲಿ ಸುಮಾರು 10 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಸಾಗಿದರು.

ಗೋಶಾಲೆ ಆವರಣದಲ್ಲಿ ಸಸಿನೆಟ್ಟ ಬಳಿಕ ಸ್ವಾಮೀಜಿಗಳಿಗೆ ಚಾರಣದ ಮನಸಾಯಿತು. ಆಗಸದಲ್ಲಿ ಮುಸುಕಿದ್ದ ಮೋಡ, ಆಗಾಗ ತುಂತುರುವಿನಂತೆ ಸುರಿಯುತ್ತಿದ್ದ ಮಳೆ ಇದಕ್ಕೆ ಇನ್ನಷ್ಟು ಪ್ರೇರಣೆ ನೀಡಿತು. ಅನಾಯಸವಾಗಿ ಹೆಜ್ಜೆ ಹಾಕುತ್ತಿದ್ದ ಸ್ವಾಮೀಜಿ, ಪರಿಸರದ ಸೊಬಗನ್ನು ಕಣ್ಮನಗಳಲ್ಲಿ ತುಂಬಿಕೊಂಡರು.

ADVERTISEMENT

ಕಾತ್ರಾಳು ಗುಡ್ಡದಲ್ಲಿ ಬೆಳೆದಿದ್ದ ಸಸ್ಯ ಸಂಪತ್ತಿನ ಬಗ್ಗೆ ಮೂವರು ಸ್ವಾಮೀಜಿಗಳು ಚರ್ಚೆ ನಡೆಸಿದರು. ಔಷಧೀಯ ಗುಣ ಹೊಂದಿದ ಸಸ್ಯಗಳ ವಿಶೇಷತೆಯನ್ನು ಭಕ್ತರಿಗೆ ವಿವರಿಸಿದರು. ಬೆಟ್ಟದಲ್ಲಿ ಬೆಳೆದಿದ್ದ ಕಾರೆ ಹಣ್ಣಿನ ವಿಶೇಷತೆಯ ಬಗ್ಗೆ ಮಾದಾರ ಚನ್ನಯ್ಯ ಸ್ವಾಮೀಜಿ ಮಾಹಿತಿ ನೀಡಿದರು. ಮಧ್ಯಾಹ್ನ 4ಕ್ಕೆ ಆರಂಭವಾದ ಚಾರಣ ಸಂಜೆ 6.30ರವರೆಗೆ ನಡೆಯಿತು. ಆದಿಚುಂಚನಗಿರಿ ಮಠದ ಆಡಳಿತಾಧಿಕಾರಿ ರಾಮಕೃಷ್ಣಗೌಡ ಜೊತೆಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.