ADVERTISEMENT

ಮೇಕೆದಾಟು ಪಾದಯಾತ್ರೆಯಿಂದ ಕೋವಿಡ್ ಉಲ್ಬಣ: ಆರೋಪ

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 6:37 IST
Last Updated 13 ಜನವರಿ 2022, 6:37 IST
ಮೊಳಕಾಲ್ಮುರಿನಲ್ಲಿ ಬುಧವಾರ ರೈತಸಂಘ, ಹಸಿರುಸೇನೆ ಮತ್ತು ಎಐಕೆಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೊಳಕಾಲ್ಮುರಿನಲ್ಲಿ ಬುಧವಾರ ರೈತಸಂಘ, ಹಸಿರುಸೇನೆ ಮತ್ತು ಎಐಕೆಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಮೊಳಕಾಲ್ಮುರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯು ಕೋವಿಡ್ ಪ್ರರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ರೈತಸಂಘ ಹಾಗೂ ಹಸಿರುಸೇನೆ ಮತ್ತು ಎಐಕೆಎಸ್ ಸಂಘನೆಗಳುಆರೋಪಿಸಿವೆ.

ಬುಧವಾರ ಈ ಸಂಬಂಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ‘ರಾಜ್ಯ ಮತ್ತು ದೇಶದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿ ಜನರು ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ವಿರೋಧಪಕ್ಷವಾಗಿ ಕೋವಿಡ್ ನಿಯಂತ್ರಣಕ್ಕೆ ಸಲಹೆ ನೀಡಬೇಕಾದ ಕಾಂಗ್ರೆಸ್ ಪಾದಯಾತ್ರೆ ಮೂಲಕ ವ್ಯವಸ್ಥೆಯನ್ನು ಕೆಡಿಸುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸುಖಾ ಸುಮ್ಮನೇ ಕಾಲಹರಣ ಮಾಡಿ ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಲ್ಲ. ಈಗ ನಿಯಮಗಳನ್ನು ಗಾಳಿಗೆ ತೂರಿ ಪಾದಯಾತ್ರೆ ನಡೆಸಿ ಸಾವಿನ ಮೇಲೆ ಸವಾರಿ ಮಾಡಲು ಮುಂದಾಗಿದೆ’ ಎಂದರು.

ADVERTISEMENT

‘ತಾಲ್ಲೂಕು ಹಲವು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿದೆ. ಬೆಳೆ ಪರಿಹಾರ ಕೊಡಿಸುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರಿಗೆ ನಂಬಿಸಿ ಮಂಕುಬೂದಿ ಎರಚುತ್ತಿದ್ದಾರೆ. ಇದರಿಂದ ಜನರು ಸಾಲಗಾರರಾಗಿದ್ದಾರೆ. ಬ್ಯಾಂಕ್ ಉಪಟಳಕ್ಕೆ ಗ್ರಾಮಗಳನ್ನು ಬಿಟ್ಟು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆತ್ಮಹತ್ಯೆ ದಾರಿ ತುಳಿಯುವುದಕ್ಕೂ ಮುನ್ನ ಈ ಬಗ್ಗೆ ಗಮನಹರಿಸಬೇಕು’ ಎಂದು ಮನವಿ
ಮಾಡಿದರು.

ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮರ್ಲಹಳ್ಳಿ ರವಿಕುಮಾರ್, ಬೆಳಗಲ್ ಈಶ್ವರಯ್ಯ ಸ್ವಾಮಿ, ಜಾಫರ್ ಷರೀಫ್, ಕೊಂಡಾಪುರ ಪರಮೇಶ್ವರಪ್ಪ, ಕನಕ ಶಿವಮೂರ್ತಿ, ಮಂಜುನಾಥ್, ಯಲ್ಲಪ್ಪ, ಟಿ. ಬಸವರಾಜ್, ಕುರಾಕಲಹಟ್ಟಿ ನಾಗರಾಜ್, ನಿಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.