ಹಿರಿಯೂರು: ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ರೋಬೊಸ್ಟಾರ್–ಜಿ 9 ತಳಿಯ (ಪಚ್ಚಬಾಳೆ/ಮೌರಿಸ್) ಬಾಳೆ ಹಣ್ಣನ್ನು ಖರೀದಿಸುವವರಿಲ್ಲದೇ ಬೇಸರಗೊಂಡ ಯುವ ರೈತರೊಬ್ಬರು ಬುಧವಾರ ಟ್ರ್ಯಾಕ್ಟರ್ ಮೂಲಕ ಬಾಳೆ ಬೆಳೆಯನ್ನು ನೆಲಸಮ ಮಾಡಿದ್ದಾರೆ.
ಎಂ.ಎ., ಬಿ.ಇಡಿ ಪದವೀಧರರಾಗಿರುವ ಚಂದ್ರಗಿರಿ ಅವರು ಕೃಷಿ–ತೋಟಗಾರಿಕೆಯಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಕೃಷಿ ಕ್ಷೇತ್ರಕ್ಕೆ ಬಂದಿದ್ದರು. ಆದರೆ, ಕೊರೊನಾ ಲಾಕ್ಡೌನ್ ಅವರ ಕನಸಿಗೆ ಪೆಟ್ಟು ನೀಡಿದೆ.
‘₹ 3 ಲಕ್ಷ ಖರ್ಚು ಮಾಡಿ ಒಂದೂವರೆ ಎಕರೆಯಲ್ಲಿ 1,500 ರೊಬೊಸ್ಟಾರ್–ಜಿ–9 ತಳಿಯ ಬಾಳೆ ನಾಟಿ ಮಾಡಿದ್ದೆ. ಮಾರ್ಚ್ನಿಂದ ಮೇ ತಿಂಗಳವರೆಗೆ ಪಚ್ಚ ಬಾಳೆಗೆ ಉತ್ತಮ ಬೇಡಿಕೆ ಇರುತ್ತದೆ ಎಂದು ಅದೇ ಸಮಯಕ್ಕೆ ಕೊಯ್ಲಿಗೆ ಬರುವಂತೆ ಬೆಳೆಸಿದ್ದೆ. ಕೊರೊನಾ ನನ್ನ ಎಲ್ಲ ಲೆಕ್ಕಾಚಾರಗಳನ್ನು ನುಚ್ಚುನೂರು ಮಾಡಿದೆ. ₹ 15ರಿಂದ ₹20ಕ್ಕೆ ಒಂದು ಕೆ.ಜಿಯಂತೆ ತೋಟಕ್ಕೇ ಬಂದು ಖರೀದಿಸುತ್ತಿದ್ದ ವರ್ತಕರನ್ನು, ‘ಎಷ್ಟಾದರೂ ಕೊಡಿ, ಬಾಳೆಗೊನೆ ಕಡಿದುಕೊಂಡು ಹೋಗಿ’ ಎಂದರೂ ಬರುತ್ತಿಲ್ಲ. ಗಿಡದಲ್ಲಿಯೇ ಹಣ್ಣಾಗಿ ಉದುರುತ್ತಿದ್ದವು. ಅಂತಿಮವಾಗಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಲು ತೀರ್ಮಾನಿಸಿದೆ’ ಎಂದು ಚಂದ್ರಗಿರಿ ಅಳಲು ತೋಡಿಕೊಂಡರು.
‘ಪಂಪ್ಸೆಟ್ ನೀರಿನ ಆಶ್ರಯದಲ್ಲಿ ಬೆಳೆ ತೆಗೆಯುವ ಕಷ್ಟ ಏನೆಂದು ಬೆಳೆದವರಿಗೆ ಮಾತ್ರ ಗೊತ್ತು. ಕರೆಂಟ್ ಬರುವುದನ್ನು ಹಗಲು–ರಾತ್ರಿ ಎನ್ನದೇ ಕಾದುಕೊಂಡಿದ್ದು ನೀರು ಹಾಯಿಸಬೇಕು. ನಮ್ಮ ಇನ್ನೊಂದು ಜಮೀನಿನಲ್ಲಿ 2,500 ಏಲಕ್ಕಿ ಬಾಳೆಗಿಡಗಳಿವೆ. ಅದಕ್ಕೂ ಬೆಲೆ ಇಲ್ಲ. ₹ 8ರಿಂದ ₹ 12ಕ್ಕೆ ಕೆ.ಜಿಯಂತೆ ಕೇಳುತ್ತಾರೆ. ಕನಿಷ್ಠ ಖರ್ಚಾದರೂ ಬರಲಿ ಎಂದು ಅದನ್ನು ಬಿಟ್ಟಿದ್ದೇನೆ’ ಎಂದು ಅವರು ಹೇಳಿದರು.
‘ತೋಟಗಾರಿಕೆ ಇಲಾಖೆಯವರು ಹಣ್ಣು–ತರಕಾರಿ ಬೆಳೆಗಳನ್ನು ಖರೀದಿಸುವ ವರ್ತಕರ ಮೊಬೈಲ್ ನಂಬರ್ ಕೊಡುತ್ತಾರೆ. ಆದರೆ, ರೈತರು ಖರೀದಿದಾರರನ್ನು ಸಂಪರ್ಕಿಸಿದರೆ, ‘ಸದ್ಯಕ್ಕೆ ಬೇಡ; ಬೇಡಿಕೆ ಇಲ್ಲ. ಕೊರೊನಾ ಮುಗಿಯಲಿ’ ಎನ್ನುತ್ತಾರೆ. ತೀರಾ ಒತ್ತಾಯ ಮಾಡಿದರೆ ಬಾಯಿಗೆ ಬಂದ ದರಕ್ಕೆ ಕೊಡುವಂತೆ ಹೇಳಿ ಫೋನ್ ಕಟ್ ಮಾಡುತ್ತಾರೆ.
ಮದುವೆ, ಜಾತ್ರೆ–ಉತ್ಸವಗಳು ನಡೆದಿದ್ದರೆ ಯಾರನ್ನೂ ಬೇಡುವ ಸನ್ನಿವೇಶ ಬರುತ್ತಿರಲಿಲ್ಲ. ಸರ್ಕಾರ ನೆರವು ನೀಡುತ್ತದೆ ಎಂಬ ನಂಬಿಕೆಯೂ ಇಲ್ಲ. ಕನಿಷ್ಠ ನಾವು ಮಾಡಿರುವ ಖರ್ಚನ್ನಾದರೂ ಸಹಾಯಧನದ ರೂಪದಲ್ಲಿ ಕೊಟ್ಟರೆ ಸಾಕು’ ಎಂದು ಚಂದ್ರಗಿರಿ
ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.