ಚಿತ್ರದುರ್ಗ: ದೇಶದ ರಕ್ಷಣಾ ಕಾರ್ಯದಲ್ಲೂ ಡಿಜಿಟಲ್ ಸಾಧನ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದೆ’ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಸರ್ಕಾರಿ ಬಾಲಕಿಯರ ವೃತ್ತಿಪರ ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ವಂದೇಮಾತರಂ ರಾಷ್ಟ್ರೀಯ ಪ್ರತಿಷ್ಠಾನ, ಮಾತೃಭೂಮಿ ಕೌಶಲಾಭಿವೃಧ್ಧಿ ತರಬೇತಿ ಕೇಂದ್ರದಿಂದ ಈಚೆಗೆ ನಡೆದ ಪ್ರಧಾನಮಂತ್ರಿ ಡಿಜಿಟಲ್ ಸಾಕ್ಷರತಾ ಅಭಿಯಾನ, ಉಚಿತ ಕಂಪ್ಯೂಟರ್ ತರಬೇತಿ ಹಾಗೂ ಡಿಜಿಟಲ್ ತಂತ್ರಜ್ಞಾನದ ಜಾಗೃತಿ ಕುರಿತ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೋವಿಡ್ ನಂತರ ಆನ್ಲೈನ್ ಶಿಕ್ಷಣಕ್ಕೂ ಮಹತ್ವ ಹೆಚ್ಚಾಗಿದೆ. ದಟ್ಟಕಾಡು, ಸಮುದ್ರದೊಳಗೂ ಏನಿದೆ ಎಂಬುದರ ಪತ್ತೆಗೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಕಂಪ್ಯೂಟರ್, ಟ್ಯಾಬ್ಲೆಟ್, ಮೊಬೈಲ್ನಿಂದಲೇ ವಿಶ್ವದ ಆಗು-ಹೋಗುಗಳ ಬೆಳವಣಿಗೆ ತಿಳಿಯುತ್ತಿದೆ. ಆದ್ದರಿಂದ ಎಲ್ಲರೂ ಡಿಜಿಟಲ್ ಜಗತ್ತನ್ನು ಅರಿಯಬೇಕಿದೆ’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿನಿದೇವಿ, ‘ಆಧುನಿಕ ಯುಗದಲ್ಲಿ ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಡಿಜಿಟಲ್ ತಂತ್ರಜ್ಞಾನ ಬಳಕೆ ಅಗತ್ಯ. ಆನ್ಲೈನ್ ವ್ಯವಸ್ಥೆಯೂ ಉತ್ತಮ ಸಾಧನವಾಗಿದೆ’ ಎಂದು ಹೇಳಿದರು.
‘ಡಿಜಿಟಲ್ ಇಂಡಿಯಾ ಎಂಬ ಪರಿಕಲ್ಪನೆಯ ಮೂಲಕ ವಿಶ್ವಮಟ್ಟದಲ್ಲೂ ಭಾರತದ ಶಕ್ತಿ ಪ್ರಚಲಿತಕ್ಕೆ ಬರುತ್ತಿದೆ. ಎಲ್ಲ ಕ್ಷೇತ್ರಕ್ಕೂ ಡಿಜಿಟಲ್ ಮಾಧ್ಯಮ ಅನಿವಾರ್ಯವಾಗುತ್ತಿದೆ. ತರಬೇತಿ ನೀಡಿ ಯುವಸಮೂಹಕ್ಕೆ ಉದ್ಯೋಗ ಕಲ್ಪಿಸಲು ತಂತ್ರಜ್ಞಾನ ಸಹಕಾರಿಯಾಗಲಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ‘ಡಿಜಿಟಲ್ ಸಾಕ್ಷರತಾ ಅಭಿಯಾನದ ಮೂಲಕ ಭಾರತ ಮಾದರಿ ರಾಷ್ಟ್ರವಾಗಬೇಕಿದೆ. ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ನೀಡಿದರೆ, ಹೆಚ್ಚು ಅನುಕೂಲವಾಗಲಿದೆ. ನೀವು ಪಡೆಯುವ ಡಿಜಿಟಲ್ ಪ್ರಮಾಣ ಪತ್ರ ಅತ್ಯಂತ ಉಪಯುಕ್ತ ಎಂಬುದನ್ನು ಮರೆಯಬೇಡಿ’ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪಿ. ಮಮತಾ, ಸಹಾಯಕ ನಿರ್ದೇಶಕ ಪರಮೇಶ್ವಪ್ಪ, ಮಾತೃಭೂಮಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ಕಾರ್ಯದರ್ಶಿ ಬಿ.ಜೆ. ಶ್ರುತಿ, ಸಿಎಸ್ಸಿ ಜಿಲ್ಲಾ ವ್ಯವಸ್ಥಾಪಕ ಎನ್.ವಿ.ಶ್ರೀನಿವಾಸ್, ಸೇವಾಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ಎಚ್.ಎನ್. ಸಮರ್ಥ್, ವಂದೇ ಮಾತರಂ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮಾಲತೇಶ್ ಅರಸ್ ಹರ್ತಿಕೋಟೆ, ವಿ.ಎಸ್. ಮೋಹನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.