ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರದಲ್ಲಿ ಬುಧವಾರ ಕೆರೆ ಕೋಡಿ ಬಿದ್ದಿದ್ದು, ನೀರು ಗ್ರಾಮಕ್ಕೆ ನುಗ್ಗಿದೆ.
15 ದಿನಗಳ ಹಿಂದೆ ಕೆರೆ ತುಂಬಿ ಕೋಡಿ ಹರಿಯಲು ಆರಂಭವಾಗಿತ್ತು. ಈ ನೀರು ಕಾಲುವೆ ಮೂಲಕ ವೆಂಕಟಾಪುರ, ವಿಠಲಾಪುರ ಮಾರ್ಗವಾಗಿ ಚಿನ್ನಹಗರಿಗೆ ಹರಿಯುತ್ತಿತ್ತು. ಆದರೆ, ಈಚೆಗೆ ಕಾಲುವೆಯಲ್ಲಿ ಮುಳ್ಳುಗಂಟಿ, ಗಿಡಗಳು ಬೆಳೆದು ಹೂಳು ತುಂಬಿಕೊಂಡಿರುವ ಕಾರಣ ನೀರು ಗ್ರಾಮದ ಒಳಗಡೆ ನುಗ್ಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಮಂಡಲಾಧ್ಯಕ್ಷ ಜೀರಹಳ್ಳಿ ತಿಪ್ಪೇಸ್ವಾಮಿ ತಿಳಿಸಿದರು.
ರಾಂಪುರ ಭಾಗದಿಂದ ಗುಂಡೇರು ಹಳ್ಳಕ್ಕೆ ಬರುವ ನೀರನ್ನು ದೇವಸಮದ್ರ ಕೆರೆಗೆ ಕಾಲುವೆ ಮೂಲಕ ತಿರುಗಿಸಿ ಕೆರೆ ತುಂಬಿಸಿಕೊಳ್ಳಲಾಗುತ್ತಿತ್ತು. ಈಗ ಕೆರೆ ತುಂಬಿರುವ ಕಾರಣ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಬುಧವಾರ ರಾತ್ರಿ ಮತ್ತೆ ಕೆಲವರು ಕೆರೆ ಕಡೆ ನೀರು ಹರಿಯುವಂತೆ ಮಾಡಿದ್ದು ಗ್ರಾಮಕ್ಕೆ ನೀರು ನುಗ್ಗಲು ಕಾರಣವಾಗಿದೆ. ಘಟನೆಯಲ್ಲಿ ಎಸ್ಸಿ ಕಾಲೊನಿ ಸೇರಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಒಳಗೆ ಎರಡು ಅಡಿ ಎತ್ತರದಷ್ಟು ನೀರು ನಿಂತುಕೊಂಡಿತ್ತು ಎಂದು ಗ್ರಾಮಸ್ಥರು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ್, ‘ಬಸಾಪುರ ಬಳಿ ಗೇಟ್ ಎತ್ತಿದ್ದ ಕಾರಣ ನೀರು ದೇವಸಮುದ್ರ ಕೆರೆ ಕಡೆ ಹರಿದಿದೆ. ಸಂಜೆ ಗೇಟ್ ಬಂದ್ ಮಾಡಿಸಲಾಗಿದ್ದು, ನೀರು ಹರಿಯದಂತೆ ಮಣ್ಣು ಹಾಕಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.