ADVERTISEMENT

‘ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಸ್ಥಗಿತ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 16:34 IST
Last Updated 11 ಜೂನ್ 2025, 16:34 IST
ಕೆ.ಅಭಿನಂದನ್
ಕೆ.ಅಭಿನಂದನ್   

ಹಿರಿಯೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಉನ್ನತ ಮಟ್ಟದಿಂದ ತಳಹಂತದವರೆಗೆ ಅಧಿಕಾರಕ್ಕಾಗಿ ಹಾದಿ–ಬೀದಿ ರಂಪಾಟ ನಡೆಯುತ್ತಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಅಭಿನಂದನ್ ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿ ವಿರೋಧಿ ಎಂದು ಅವರದ್ದೇ ಪಕ್ಷದ ನಗರಸಭಾಧ್ಯಕ್ಷರು ಬಹಿರಂಗ ಹೇಳಿಕೆ ನೀಡಿದ್ದಾರೆ. ಎರಡು ವರ್ಷದ ಹಿಂದೆ ಆರಂಭವಾಗಬೇಕಿದ್ದ ಸಾರಿಗೆ ಸಂಸ್ಥೆ ಡಿಪೊ, ಹೈಟೆಕ್ ಆಸ್ಪತ್ರೆಗಳು ಆರಂಭವಾಗಿಲ್ಲ. ಹುಳಿಯಾರು ರಸ್ತೆ ಅಗಲೀಕರಣ ಎಂಬುದು ದೊಡ್ಡ ಪ್ರಹಸನವಾಗಿದೆ. ರಸ್ತೆ ಬದಿಯ ಕಟ್ಟಡಗಳನ್ನು ತೆರವುಗೊಳಿಸಿ ಆರು ತಿಂಗಳು ಕಳೆದರೂ ಅರ್ಧ ಕಿ.ಮೀ. ರಸ್ತೆಯನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಆಡಳಿತದಿಂದ ಆಗಿಲ್ಲ. ಪ್ರವಾಸಿ ಮಂದಿರದಿಂದ ವೇದಾವತಿ ಸೇತುವೆವರೆಗೆ ವಾಹನ ಸವಾರರು ನಿತ್ಯ ದೂಳಿನ ಸ್ನಾನ ಮಾಡಬೇಕಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಪಾದಿಸಿದ್ದಾರೆ.

ಲಕ್ಕವ್ವನಹಳ್ಳಿ ರಸ್ತೆಯಿಂದ ವೇದಾವತಿ ಸೇತುವೆ ರಸ್ತೆಯನ್ನು ಸಂಪರ್ಕಿಸುವ ಬೈಪಾಸ್ ರಸ್ತೆ ಸ್ಥಗಿತಗೊಂಡು ಮೂರು ವರ್ಷ ಕಳೆದಿದೆ. ವಾಣಿವಿಲಾಸ ಬಲನಾಲೆಯಿಂದ ಸಾಯಿ ಬಡಾವಣೆಗೆ ಹೋಗುವ ರಸ್ತೆಗೆ ಶಂಕುಸ್ಥಾಪನೆ ಮಾಡಿ ಹತ್ತು ತಿಂಗಳು ಕಳೆದರೂ ಡಾಂಬರು ಹಾಕಿಲ್ಲ. ಗುಂಡಿ ತೋಡಿ ಪೂಜೆ ಮಾಡುವುದಕ್ಕೆ ಈ ಸರ್ಕಾರ ಸೀಮಿತವಾಗಿದೆ. 2022 ರ ಚುನಾವಣೆಯಲ್ಲಿ ಸೋತ ನಂತರ ಸ್ಥಳೀಯ ಬಿಜೆಪಿ ಶಾಸಕಿ ಕಾಂಗ್ರೆಸ್ ಸೇರಿದ್ದು, ತನ್ನನ್ನು ಪ್ರಶ್ನಿಸುವವರೇ ಇಲ್ಲವೆಂಬ ಧೋರಣೆ ಬಿಟ್ಟು ಜನಪರ ಕೆಲಸಗಳನ್ನು ಮಾಡಲು ಸಚಿವರು ಮುಂದಾಗಬೇಕು. ಇಲ್ಲವಾದಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ಅಭಿನಂದನ್ ಎಚ್ಚರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.