ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಸೂಚಿಸಿದ ಅಂತರದ ನಿಯಮ ಪಾಲನೆ ಮಾಡದವರ ಮೇಲೆ ನಗರಸಭೆ ದಂಡ ಪ್ರಯೋಗ ಮಾಡುತ್ತಿದೆ. ಆರು ಜನರಿಗೆ ತಲಾ ₹ 200 ದಂಡ ವಿಧಿಸಲಾಗಿದೆ.
ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಪಾಡುವುದು ಕಡ್ಡಾಯ. ಮಾಸ್ಕ್ ಧರಿಸದ ವ್ಯಕ್ತಿಗೆ ಪೊಲೀಸರು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆ ಅಧಿಕಾರಿಗಳು ದಂಡ ವಿಧಿಸುವ ಅಧಿಕಾರ ಹೊಂದಿದ್ದಾರೆ. ಅಂತರ ಕಾಪಾಡದೇ ನಿರ್ಲಕ್ಷ್ಯ ತೋರುವವರ ಮೇಲೆಯೂ ದಂಡದ ಅಸ್ತ್ರ ಪ್ರಯೋಗವಾಗಲಿದೆ.
ಮಾರುಕಟ್ಟೆ, ಪ್ರಮುಖ ವೃತ್ತ, ಹೋಟೆಲ್, ಅಂಗಡಿ, ಬಸ್ ನಿಲ್ದಾಣ ಸೇರಿ ಹಲವೆಡೆ ಅಂತರ ಮರೆತು ಜನರು ಸಂಚರಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಆಗಾಗ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು. ಅಂತರ ಕಾಪಾಡಿಕೊಳ್ಳುವಂತೆ ಅಂಗಡಿ ಮಾಲೀಕರಿಗೂ ಸೂಚನೆ ನೀಡುತ್ತಿದ್ದರು. ಇದಕ್ಕೆ ಮಣಿಯದೇ ಇದ್ದಾಗ ದಂಡದ ಮೊರೆ ಹೋಗಿದ್ದಾರೆ.
‘ಮಾಸ್ಕ್ ಧರಿಸದವರಿಗೆ ಮಾತ್ರ ಈವರೆಗೆ ದಂಡ ವಿಧಿಸುತ್ತಿದ್ದೆವು. ಇನ್ನು ಮುಂದೆ ಅಂತರ ಕಾಪಾಡದವರಿಗೂ ದಂಡ ವಿಧಿಸಲಾಗುವುದು. ನಗರಸಭೆ ಸಿಬ್ಬಂದಿಯ ತಂಡ ಸಂಚರಿಸಿ ನಿರ್ಲಕ್ಷ್ಯ ತೋರುವವರನ್ನು ಪತ್ತೆ ಮಾಡಲಿದೆ’ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.