ಚಿತ್ರದುರ್ಗ: ಯೋಜನೆ ಸಿದ್ಧಪಡಿಸಿದ್ದರೆ ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಅದನ್ನು ನನಗೆ ತೋರಿಸುವ ಅಗತ್ಯವಿಲ್ಲ. ನಿಮ್ಮ ಪ್ರಗತಿಯನ್ನು ತೋರಿಸಿ. ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ. ನನಗೆ ಬೇಕಾದಷ್ಟು ಕೆಲಸಗಳಿವೆ...
ಗುರುವಾರ ನಡೆದ ಜಿಲ್ಲಾ ಕೌಶಲ ಮಿಷನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ,ಉದ್ಯೋಗ ವಿನಿಮಯಕೇಂದ್ರದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿ ಇದು.
‘ಕೌಶಲ ಪಡೆಯುವ ತವಕ ಇದ್ದವರು ನೋಂದಣಿ ಮಾಡಿಕೊಳ್ಳಬೇಕು. ಅಂಥವರಿಗೆ ಸೂಕ್ತ ತರಬೇತಿ ನೀಡಿ ವಿದ್ಯಾರ್ಹತೆ, ಕೌಶಲಕ್ಕೆ ಅನುಗುಣವಾಗಿ ಉದ್ಯೋಗ ಕೊಡಿಸುವ ಕೆಲಸವಾಗಬೇಕು. ಈ ಮಾರ್ಗವನ್ನು ಸರಿಯಾಗಿ ಅನುಸರಿಸುತ್ತಿದ್ದರೆ ಮಾಹಿತಿ ನೀಡಿ’ ಎಂದು ಕೇಳಿದರು.
‘ನೋಂದಣಿ ಮಾಡಿಕೊಂಡು ತರಬೇತಿ ನೀಡುತ್ತಿದ್ದೇವೆ. ಆದರೆ, ಬಹುತೇಕರು ಸರ್ಕಾರಿ ಉದ್ಯೋಗ ಬೇಕು ಎನ್ನುತ್ತಾರೆ. ಖಾಸಗಿ ಉದ್ಯೋಗ ಕೊಡಿಸಿದರೆ ಹೋಗಲು ಹಿಂದೇಟು ಹಾಕುತ್ತಾರೆ’ ಎಂದು ಉದ್ಯೋಗ ವಿನಿಯಮ ಕೇಂದ್ರದ ಅಧಿಕಾರಿಗಳು ಸಭೆಗೆ ತಿಳಿಸಿದರು.
‘ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಉದ್ಯೋಗ ಕೊಡಿಸುವ ಪ್ರಯತ್ನ ಹೆಚ್ಚಾಗಬೇಕು’ ಎಂದ ಜಿಲ್ಲಾಧಿಕಾರಿ, ‘ನೋಡಿ ನೀವು ಕಳೆದ ಬಾರಿ ತೋರಿಸಿದ ಅಂಕಿ-ಅಂಶವನ್ನೇ ಈ ಬಾರಿಯ ಸಭೆಗೂ ನೀಡಿದ್ದೀರಾ. ಅನೇಕ ವರ್ಷಗಳಿಂದ ಅದೇ ಮಾಹಿತಿ ನೀಡುತ್ತಿದ್ದೀರಿ. ಪ್ರಗತಿ ತೋರಿಸದೇ ಇದ್ದರೆ ಸಭೆ ಏಕೆ ಮಾಡಬೇಕು’ ಎಂದು ಪ್ರಶ್ನಿಸಿದರು.
‘ಉದ್ಯೋಗದ ಹಂಬಲ ಇರುವವರಿಗೆ ಮಾತ್ರ ಅವಕಾಶ ನೀಡಿ. ಜಿಲ್ಲೆಯಲ್ಲಿ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳು ಎಷ್ಟಿವೆ ಎಂಬುದನ್ನು ಗುರುತಿಸಿ. ಅವು ಅಧಿಕೃತವಾಗಿ ನೋಂದಣಿ ಆಗಿವೆಯೇ ಎಂಬ ಮಾಹಿತಿ ಕಲೆಹಾಕಿ’ ಎಂದು ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.