ಚಿತ್ರದುರ್ಗ: ‘ವೈದ್ಯರ ವಿರುದ್ಧ ನಡೆಯುವ ಹಿಂಸೆ ತಡೆಗೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಕಾಯ್ದೆ ಇಡೀ ದೇಶದಲ್ಲಿ ಮಾದರಿಯಾಗಿದೆ. ಕಾಯ್ದೆ ಜಾರಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಪದಾಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಬಿ.ಬಿಡಿನಹಾಳ್ ಹೇಳಿದರು.
ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಭಾರತೀಯ ವೈದ್ಯಕೀಯ ಸಂಘದ ದಕ್ಷಿಣ ವಲಯದ ಸಮಾವೇಶ ‘ಕಾಂಪೋಸ್ಟ್– 2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಭಾರತೀಯ ವೈದ್ಯಕೀಯ ಸಂಘ ದೇಶದಾದ್ಯಂತ ಉತ್ತಮ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರ ವಿರುದ್ಧ ನಡೆಯುವ ಹಿಂಸೆ ತಡೆಗೆ ಶ್ರೇಷ್ಠ ಕಾನೂನು ಜಾರಿಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ವೈದ್ಯಕೀಯ ವಲಯದಲ್ಲಿ ನಡೆಯುವ ಎಲ್ಲಾ ಹೊಸ ಅನ್ವೇಷಣೆಗಳನ್ನು ವೈದ್ಯರು ತಮ್ಮ ಅಭ್ಯಾಸದಲ್ಲಿ ಅಳವಡಿಸಿಕೊಳ್ಳಲು ಸಂಘವು ಪ್ರೇರಣೆಯಾಗಿ ನಿಂತಿದೆ’ ಎಂದರು.
‘ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ವೈದ್ಯರ ಗುರಿಯಾಗಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ವಲಯದ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವಲ್ಲಿ ಐಎಂಎ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಯುವ ವೈದ್ಯರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
‘ದೇಶದಾದ್ಯಂತ ವಿವಿಧ ವೈದ್ಯಕೀಯ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲವನ್ನೂ ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ನಾವು ವಿವಿಧ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬರುತ್ತಿದ್ದೇವೆ. ವೈದ್ಯಕೀಯ ನೆರವು ಹಾಗೂ ಕಾನೂನಿನ ನಡುವೆ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಉದ್ದೇಶದಿಂದ ವಿವಿಧ ಚಟುವಟಿಕೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ’ ಎಂದರು.
‘ತಜ್ಞ ವೈದ್ಯರು ತಾವು ನೀಡುವ ಚಿಕಿತ್ಸಾ ವಿಧಾನದಲ್ಲಿ ಹೊಸ ವಿಧಾನ ಅಳವಡಿಕೊಳ್ಳುವ ಉದ್ದೇಶದಿಂದ ಸದಾ ಅಧ್ಯಯನಶೀಲರಾಗಬೇಕು. ವೈದ್ಯಕೀಯ ಸಂಬಂಧಿತ ವಿವಿಧ ಕೋರ್ಸ್, ತರಬೇತಿ, ಶಿಬಿರ, ಕಮ್ಮಟಗಳನ್ನು ಆಯೋಜನೆ ಮಾಡಲಾಗಿದ್ದು ವೈದ್ಯರು, ವೈದ್ಯಕೀಯ ಸಂಬಂಧಿತ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ’ ಎಂದರು.
‘ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುವುದು ಮಾತ್ರವಲ್ಲದೇ ತಮ್ಮ ಅಭ್ಯಾಸದಲ್ಲಿ ಕೌಶಲಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಹೊಸ ಹೊಸ ವಿಚಾರಗಳಲ್ಲಿ ತಿಳಿವಳಿಕೆ ಹೊಂದಬೇಕು. ಇದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ ವಿವಿಧ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ಚಿತ್ರದುರ್ಗದ ಐಎಂಎ ಶಾಖೆ ಕೂಡ ಉತ್ತಮವಾಗಿ ಕೆಲಸ ಮಾಡುತ್ತಾ ಬಂದಿದೆ’ ಎಂದರು.
ಐಎಂಎ ರಾಜ್ಯ ಘಟಕದ ಅಧ್ಯಕ್ಷೆ ಡಾ.ವಿ.ವಿ.ಚಿನಿವಾಲರ್, ನಿಯೋಜಿತ ಅಧ್ಯಕ್ಷ ವೀರಭದ್ರಯ್ಯ, ಪದಾಧಿಕಾರಿಗಳಾದ ಡಾ.ವೆಂಕಟಾಚಲಪತಿ, ಡಾ.ಶಂಕರನಾರಾಯಣ, ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪ್ರಶಾಂತ್, ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಯುವರಾಜ್, ಐಎಂಎ ಚಿತ್ರದುರ್ಗ ಘಟಕದ ಅಧ್ಯಕ್ಷ ಡಾ.ಎಲ್.ಫಾಲಾಕ್ಷಯ್ಯ, ಕಾರ್ಯದರ್ಶಿ ಡಾ.ಎನ್.ಬಿ.ಪ್ರಹ್ಲಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.