ADVERTISEMENT

ನಾಯಕನಹಟ್ಟಿ: ತಿಪ್ಪೇಶನಿಗೆ ದೊಡ್ಡ ಕಾರ್ತಿಕೋತ್ಸವ ಸಂಭ್ರಮ

ರಥ ಎಳೆದು ಮೆಣಸು, ಬೆಲ್ಲದ ಚೂರು ಎರಚಿ ಹರಕೆ ಸಲ್ಲಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 6:45 IST
Last Updated 3 ಡಿಸೆಂಬರ್ 2022, 6:45 IST
ನಾಯಕನಹಟ್ಟಿ ಪಟ್ಟಣದಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವದ ಅಂಗವಾಗಿ ರಥದಲ್ಲಿ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥವನ್ನು ಎಳೆಯಲಾಯಿತು.
ನಾಯಕನಹಟ್ಟಿ ಪಟ್ಟಣದಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವದ ಅಂಗವಾಗಿ ರಥದಲ್ಲಿ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥವನ್ನು ಎಳೆಯಲಾಯಿತು.   

ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ದೊಡ್ಡ ಕಾರ್ತಿಕೋತ್ಸವ ಶುಕ್ರವಾರ ಸಡಗರದಿಂದ ನಡೆಯಿತು.

ಶುಕ್ರವಾರ ಬೆಳಿಗ್ಗೆಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ರಥವನ್ನು ಸಿಂಗಾರ ಮಾಡಲಾಗಿತ್ತು. ಮಧ್ಯಾಹ್ನ 3ಕ್ಕೆ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿವಿಧಾನಗಳಿಂದ ಪ್ರತಿಷ್ಠಾಪಿಸಿ ರಥಕ್ಕೆ ಚಾಲನೆ ನೀಡಲಾಯಿತು.

ಭಕ್ತರು ಸಂಭ್ರಮದಿಂದ ರಥವನ್ನು ಎಳೆದರು. ರಥ ಸಾಗುವ ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಬಾಳೆಹಣ್ಣು, ಕಾಳುಮೆಣಸು, ಬೆಲ್ಲದ ಚೂರನ್ನು ರಥಕ್ಕೆ ಹಾಕಿ ಹರಕೆ ಪೂರೈಸಿದರು. ಪಂಜು, ಕರಡಿ ಮಜಲು, ಡೊಳ್ಳು ವಾದ್ಯ ಹಾಗೂ ನಂದಿಕೋಲು ಕುಣಿತ ಆಕರ್ಷಿಸಿತು.

ADVERTISEMENT

ರಥ ಸಾಗುತ್ತ ವೀರಭದ್ರನ ಓಣಿಗೆ ಬಂದಾಗ ಹರಕೆ ಹೊತ್ತ ನೂರಾರು ಯುವಕರು ಬೆಳಿಗ್ಗೆಯಿಂದಲೇ ಉಪವಾಸ ವ್ರತ ಕೈಗೊಂಡಿದ್ದರು. ಯುವಕರು ಶಸ್ತ್ರ ಪೂಜಾ ವಿಧಿಗಳನ್ನು ಕೈಗೊಂಡು, ಚೂಪಾದ ಪಂಚಲೋಹದ ಕಡ್ಡಿಗಳನ್ನು ಬಾಯಿಗೆ ಸಿಕ್ಕಿಸಿಕೊಂಡು ವೀರಭದ್ರ ಕುಣಿತ ಪ್ರದರ್ಶಿಸಿದರು.

ನಂತರ ಸಂಜೆ ಸಕಲ ಬಿರುದಾವಳಿಗಳಿಂದ ದೇವರನ್ನು ಗುಡಿದುಂಬಿಸಲಾಯಿತು. ನಂತರ ನೆರೆದ ಭಕ್ತರೆಲ್ಲರಿಗೂ ವಿಶೇಷವಾದ ಸಜ್ಜೆ ಮತ್ತು ಕಡ್ಲೆಕಾಳು ಮೊಳಕೆಯನ್ನು ಪ್ರಸಾದವಾಗಿ ವಿತರಿಸಿದರು. ಉತ್ಸವಕ್ಕೆ ಜನಪದ ಕಲಾತಂಡಗಳಾದ ಕೋಲಾಟ, ಬೊಂಬೆ ಕುಣಿತ, ಮೆರುಗು ಹೆಚ್ಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.