ADVERTISEMENT

ದುಮ್ಮಿಗೊಲ್ಲರಹಟ್ಟಿ ಜುಂಜಪ್ಪ ಸ್ವಾಮಿ ಜಾತ್ರೆ ನಾಳೆಯಿಂದ

ಬಯಲು ಸೀಮೆಯ ಬುಡಕಟ್ಟು ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 14:52 IST
Last Updated 2 ಜನವರಿ 2021, 14:52 IST
ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿರುವ ಜುಂಜಪ್ಪ ಸ್ವಾಮಿ ದೇವಾಲಯ
ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿರುವ ಜುಂಜಪ್ಪ ಸ್ವಾಮಿ ದೇವಾಲಯ   

ಹೊಳಲ್ಕೆರೆ: ತಾಲ್ಲೂಕಿನ ದುಮ್ಮಿಗೊಲ್ಲರ ಹಟ್ಟಿಯ ಐತಿಹಾಸಿಕ ಜುಂಜಪ್ಪ ಸ್ವಾಮಿ ಜಾತ್ರೆ ಜ.4ರಿಂದ ಜ.6ರವರೆಗೆ ನಡೆಯಲಿದೆ. ಜ.5ರಂದು ಮಹಾಜಾತ್ರೆ ನಡೆಯಲಿದೆ. ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ನೂತನ ದೇವಾಲಯ ಬಣ್ಣಗಳಿಂದ ಕಂಗೊಳಿಸುತ್ತಿದೆ.

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಬರಲಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದ ಹೊರಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿದ್ದು, ಜಾತ್ರೆ ನಡೆಯುವ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಬಯಲು ಸೀಮೆ ಜನರ ಆರಾಧ್ಯ ದೈವ ಜುಂಜಪ್ಪ ಸ್ವಾಮಿ ಪವಾಡ ಪುರುಷನೆಂದೇ ಖ್ಯಾತಿ. ಜಾತ್ರೆಯಲ್ಲಿ ಬುಡಕಟ್ಟು ಪರಂಪರೆ ಅನಾವರಣಗೊಳ್ಳಲಿದೆ. ಜಾತ್ರೆಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ, ಕದಳಿ ಪೂಜೆ, ಎಳ್ಳಿನ ಪೂಜೆ, ಹೂವಿನ ಉತ್ಸವ, ಎಲೆ ಪೂಜೆ, ಉಗ್ಗದ ಗಡಿಗೆ, ಹಾಲು ಕಂಬಿಗೆ, ಕಂಚಿನ ಕಡಗಕ್ಕೆ ವಿಶೇಷ ಪೂಜೆಗಳು ನಡೆಯಲಿವೆ. ಗುಗ್ಗಳ ಹೊರುವುದು ಜಾತ್ರೆಯ ವಿಶೇಷ ಆಚರಣೆಯಾಗಿದ್ದು, ಮಕ್ಕಳಿಂದ ವೃದ್ಧರವರೆಗೆ ಗುಗ್ಗಳದ ಮಡಿಕೆ ಹೊರುತ್ತಾರೆ.

ADVERTISEMENT

‘ನಮ್ಮ ಊರಿನ ಜಾತ್ರೆಗೆ ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ದಾವಣಗೆರೆ, ಬೆಂಗಳೂರು ಮತ್ತಿತರೆ ಕಡೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಹಾವು, ಚೇಳು ಕಡಿದವರು ಮುಡುಪು ಕಟ್ಟಿಕೊಂಡು ಬಂದು ದೇವಾಲಯದಲ್ಲಿ ನಾಲ್ಕಾರು ದಿನ ಉಳಿದುಕೊಳ್ಳುತ್ತಾರೆ. ವರ್ಷದ ಎಲ್ಲಾ ಕಾಲದಲ್ಲೂ ಭಕ್ತರು ದೇವಾಲಯಕ್ಕೆ ಬರುವುದರಿಂದ ತಂಗಲು ವಿಶ್ರಾಂತಿ ಗೃಹದ ಅಗತ್ಯ ಇದೆ. ಭಕ್ತರು ಶುಭ ಕಾರ್ಯಗಳನ್ನು ಜುಂಜಪ್ಪ ಸ್ವಾಮಿ ಸಾಂಸ್ಕೃತಿಕ ಭವನ ನಿರ್ಮಸಬೇಕು’ ಎಂದು ಗ್ರಾಮದ ಮುಖಂಡ ಎ.ಚಿತ್ತಪ್ಪ ಯಾದವ್ ಒತ್ತಾಯಿಸಿದರು.

‘ಗ್ರಾಮದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಜುಂಜಪ್ಪ ಸ್ವಾಮಿ ದೇವಸ್ಥಾನ ನಿರ್ಮಿಸಲಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ. ಭಕ್ತರು ದೇವಾಲಯ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಗ್ರಾಮದ ಅಂಗಡಿ ತಿಮ್ಮಪ್ಪ, ಗೌಡ್ರು ಕುಬೇಂದ್ರಪ್ಪ, ರವಿ ಸುದ್ದೇರ್, ನಾಗಪ್ಪ ರೇವಣಸಿದ್ದಪ್ಪ, ಗೋವಿಂದಪ್ಪ ಮನವಿ ಮಾಡಿದರು.

‘ಕೋವಿಡ್ ಇರುವುದರಿಂದ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು’ ಎಂದು ದೇವಾಲಯ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.