ADVERTISEMENT

ಸಾಧಕರೊಂದಿಗೆ ಸಂವಾದ- ಮಕ್ಕಳ ಆಯ್ಕೆಗೆ ಪೋಷಕರು ಪ್ರೋತ್ಸಾಹಿಸಿ: ಎಸ್ಪಿ ಜಿ. ರಾಧಿಕಾ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 6:08 IST
Last Updated 29 ನವೆಂಬರ್ 2021, 6:08 IST
ಚಿತ್ರದುರ್ಗದ ಎಸ್‌ಆರ್‌ಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಉದ್ಘಾಟಿಸಿದರು. ಎಸ್‌ಆರ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಇದ್ದರು.
ಚಿತ್ರದುರ್ಗದ ಎಸ್‌ಆರ್‌ಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಉದ್ಘಾಟಿಸಿದರು. ಎಸ್‌ಆರ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಇದ್ದರು.   

ಚಿತ್ರದುರ್ಗ: ‘ಮಕ್ಕಳು ಯಾವ ಕ್ಷೇತ್ರ ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುತ್ತಾರೋ ಅದಕ್ಕೆ ಪೋಷಕರು ಬೆಂಬಲಿಸುವ ಮೂಲಕ ಪ್ರೋತ್ಸಾಹಿಸಿದರೆ ಸಾಧಕರಾಗಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸಲಹೆ ನೀಡಿದರು.

ಇಲ್ಲಿಯ ಎಸ್‌ಆರ್‌ಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಎಂಜಿನಿಯರಿಂಗ್‌, ವೈದ್ಯಕೀಯ ಕ್ಷೇತ್ರಕ್ಕೆ ಹೋಗಬೇಕು ಎಂಬುದಾಗಿ ಮಕ್ಕಳ ಮೇಲೆ ಪೋಷಕರು ಒತ್ತಡ ಹೇರುವುದು ಸೂಕ್ತವಲ್ಲ. ಕ್ಷೇತ್ರ ಆಯ್ಕೆ ವಿಚಾರದಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು’ ಎಂದರು.

ADVERTISEMENT

ನೀಟ್, ಜೆಇಇ ಹಾಗೂ ಸಿಇಟಿಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದ ಎಚ್‌.ಕೆ. ಮೇಘನ್ ಮಾತನಾಡಿ, ‘ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಸ್ಪರ್ಧೆಯೂ ಹೆಚ್ಚಿದೆ. ಹೀಗಾಗಿ ಹೆಚ್ಚು ಅಧ್ಯಯನ ಮಾಡಬೇಕು. ಅದರ ಜತೆಗೆ ಕೌಶಲ ಮೈಗೂಡಿಸಿಕೊಳ್ಳಬೇಕು. ಯುವಸಮೂಹ ಈ ದೇಶದ ಆಸ್ತಿಯಾಗಿದ್ದು, ಪ್ರಗತಿ ಪಥದಲ್ಲಿ ಮುನ್ನಡೆಸಬೇಕು’ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಗಂಗಾಧರ್, ‘ಪದವಿ ಪೂರ್ವ ಶಿಕ್ಷಣ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ದಾರಿಮಾಡಿಕೊಡಲಿದೆ. ಆದ್ದರಿಂದ ಈ ಅವಧಿಯನ್ನು ಸರ್ಧಾತ್ಮಕವಾಗಿಯೇ ಪರಿಗಣಿಸಬೇಕು. ಆಗ ಮಾತ್ರ ಜೀವನದಲ್ಲಿ ಉತ್ತಮ ನೆಲೆ ಕಂಡುಕೊಳ್ಳಲು ಸಾಧ್ಯ’ ಎಂದು ಹೇಳಿದರು.

ಇದೇ ವೇಳೆ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳಾದ ಜಿ.ಪಿ. ಗೌರಂಗ್ ಮಂಜುನಾಥ್, ಪಿ.ಎಂ. ಅಭಿಷೇಕ್, ಆರ್‌. ಶ್ರೇಯಸ್, ಧೃವ ಎನ್.ಎಲ್. ಚೌಧರಿ, ಮಹಾಲಕ್ಷೀ ಸಾಹುಕಾರ್, ನೇಹಾ ಚೋಪ್ರಾ, ಸಿ.ಎಂ. ಚೈತನ್ಯ, ಮಧುಸೂದನ್, ಎಸ್‌.ಎಸ್‌. ಸಾಕ್ಷಿನಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಆರ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.