ADVERTISEMENT

ಗ್ರಾಮ ಪಂಚಾಯಿತಿ ನೇಮಕಾತಿಯಲ್ಲಿ ಅಕ್ರಮ ಆರೋಪ: ಐಎಎಸ್‌ ಅಧಿಕಾರಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 14:41 IST
Last Updated 7 ಅಕ್ಟೋಬರ್ 2020, 14:41 IST
   

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಎರಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಿಬ್ಬಂದಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಸೇರಿ 37 ಜನರ ವಿರುದ್ಧ ಐಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ ರಾಜ್‌ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ಉಮಾ ಮಹದೇವನ್‌, ಮುಖ್ಯ ನಿರ್ದೇಶಕ ಎಸ್‌.ಅಶ್ರಫುಲ್‌ ಹಸನ್‌, ಸಹ ಕಾರ್ಯದರ್ಶಿ ನವೀನ್‌ಕುಮಾರ್‌, ಹಿರಿಯೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ರಾಮಕುಮಾರ್ ಸೇರಿ ಹಲವು ಅಧಿಕಾರಿಗಳು ಆರೋಪಿತರ ಪಟ್ಟಿಯಲ್ಲಿದ್ದಾರೆ.

ಸ್ಥಳೀಯ ಸಂಸ್ಥೆಯ ಪೂರ್ವಾನುಮತಿ ಪಡೆಯದೇ ಗ್ರಾಮ ಪಂಚಾಯಿತಿಯ ‘ಡಿ’ ಗ್ರೂಪ್‌ಗೆ ಸೇರಿದ ಆರು ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಉಪಾಧ್ಯಕ್ಷರಾಗಿದ್ದ ಕಂದಿಕೆರೆ ಜಗದೀಶ್‌ 2018ರಲ್ಲಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರು ನೇಮಕಾತಿ ರದ್ದುಗೊಳಿಸಲು ಆದೇಶ ನೀಡಿದ್ದರು.

ADVERTISEMENT

ಆದೇಶ ಹೊರಬಿದ್ದ ಬಳಿಕ ಇಬ್ಬರು ಸ್ವಯಂ ಪ್ರೇರಿತವಾಗಿ ಕೆಲಸ ತ್ಯಜಿಸಿದ್ದರು. ಉಳಿದ ನಾಲ್ವರು ಕರ್ತವ್ಯಕ್ಕೆ ಹಾಜರಾಗಿ ವೇತನ ಪಡೆಯುತ್ತಿದ್ದರು. ಇದಕ್ಕೆ ಹಿರಿಯ ಅಧಿಕಾರಿಗಳು ಅವಕಾಶ ಕಲ್ಪಿಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ದೂರುದಾರ ಜಗದೀಶ್‌, ನ್ಯಾಯಾಲಯದ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಹಿರಿಯೂರು ಜೆಎಂಎಫ್‌ಸಿ ನ್ಯಾಯಾಲಯ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲಿಸಲು ಸೆ.25ರಂದು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.