ಹಿರಿಯೂರು: ‘ಫೂಟ್ ಪಲ್ಸ್ ಥೆರಪಿ ಸ್ವದೇಶಿ ಸಂಶೋಧಿತ ವೈದ್ಯಕೀಯ ಆವಿಷ್ಕಾರವಾಗಿದ್ದು, ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾದ ಕೊಡುಗೆಯಾಗಿದೆ’ ಎಂದು ರೋಟರಿ ಅಧ್ಯಕ್ಷ ಎಚ್. ಕಿರಣ್ ಕುಮಾರ್ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಗುರುವಾರ ಸಂಜೆ ರೋಟರಿ ಸಂಸ್ಥೆ, ರೆಡ್ಕ್ರಾಸ್ ಸಂಸ್ಥೆ ಹಾಗೂ ಚಿತ್ರದುರ್ಗದ ಕಂಪೋನಿಯೊ ಸಂಸ್ಥೆ ವತಿಯಿಂದ ನಡೆದ ಉಚಿತ ಫೂಟ್ ಪಲ್ಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಥೆರಪಿಯಿಂದ ದೇಹದಲ್ಲಿ ರಕ್ತ ಸಂಚಲನ ಸುಲಲಿತವಾಗುವುದಲ್ಲದೇ, ರೋಗಿಗಳಲ್ಲಿ ಮನೆಮಾಡಿರುವ ಆತಂಕವನ್ನು ದೂರ ಮಾಡಲಿದೆ. ಸ್ವದೇಶಿ ಸಂಶೋಧಿತ ವೈದ್ಯಕೀಯ ವ್ಯವಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.
ರೆಡ್ಕ್ರಾಸ್ ಚೇರ್ಮನ್ ಎಚ್.ಎಸ್. ಸುಂದರರಾಜ್ ಮಾತನಾಡಿ, ‘ಫೂಟ್ ಥೆರಪಿಯಲ್ಲಿ ಯಾವುದೇ ಅಡ್ಡ ಪರಿಣಾಮ ಇಲ್ಲ. ದೀರ್ಘಕಾಲದಿಂದ ರೋಗಿಗಳನ್ನು ಕಾಡುತ್ತಿರುವ ಥೈರಾಯ್ಡ್, ಮಧುಮೇಹ, ರಕ್ತದೊತ್ತಡ, ಬೊಜ್ಜು ನಿವಾರಣೆ, ಬೆನ್ನು ನೋವು ಇದರಿಂದ ನಿಯಂತ್ರಣಕ್ಕೆ ಬರಲಿದೆ’ ಎಂದರು.
ಜಿಲ್ಲಾ ರೋಟರಿ ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ, ಅ. 10ರವರೆಗೆ ನಡೆಯಲಿರುವ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ಎ. ರಾಘವೇಂದ್ರ, ಬಿ.ಕೆ. ನಾಗಣ್ಣ, ಬಿ.ಜೆ. ರಾಘವೇಂದ್ರಾಚಾರ್, ಜಿ.ಎಸ್. ಕಿರಣ್, ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.