ಹೊಸದುರ್ಗ: ಪಟ್ಟಣದ ಕೋಟೆ ಶ್ರೀರಾಮದೇವರ ಬ್ರಹ್ಮರಥೋತ್ಸವವು ಭಕ್ತರ ಸಮ್ಮುಖದಲ್ಲಿ ಬುಧವಾರ ಸರಳವಾಗಿ ನಡೆಯಿತು.
ಶ್ರೀರಾಮನವಮಿ ಅಂಗವಾಗಿ ತಳಿರು ತೋರಣ, ವಿದ್ಯುತ್ ದೀಪಗಳಿಂದ ದೇಗುಲವನ್ನು ಅಲಂಕರಿಸಲಾಗಿತ್ತು.
ಬಣ್ಣ ಬಣ್ಣದ ಬಟ್ಟೆ, ಬಾವುಟ, ದೊಡ್ಡ ಹೂವು ಮಾಲೆಗಳಿಂದ ಆಕರ್ಷಕವಾಗಿ ರಥವನ್ನು ಅಲಂಕರಿಸಲಾಯಿತು. ಸಿಂಗರಿಸಿದ್ದ ಶ್ರೀರಾಮದೇವರ ಮೂರ್ತಿಯನ್ನು ದೇಗುಲದ ಒಳಭಾಗದಿಂದ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ದೇವರು ರಥಾರೋಹಣ ಮಾಡುತ್ತಿದ್ದಂತೆ ‘ಶ್ರೀರಾಮ ಪಾದಕ್ಕೆ ಗೋವಿಂದಾ, ಗೋವಿಂದಾ’ ಎಂದು ಭಕ್ತರು ಜಯಘೋಷ ಕೂಗಿದರು.
ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಕೋಟೆಯ ಮುಖ್ಯ ಬೀದಿಗಳಲ್ಲಿ ಸಾಗಿತು. ಭಕ್ತರು ಪಾಲಕ, ಪಲ್ಲಾರ, ಮಜ್ಜಿಗೆ, ಕೊಸಂಬರಿ ವಿತರಿಸಿದರು. ಕೋಟೆ ಬನಶಂಕರಿ, ಗ್ರಾಮದೇವತೆ ದುರ್ಗಾಂಬಿಕಾದೇವಿ, ಕೊಲ್ಲಾಪುರದಮ್ಮ, ವೀರಭದ್ರಸ್ವಾಮಿ, ಈಶ್ವರಸ್ವಾಮಿ, ಆಂಜನೇಯಸ್ವಾಮಿ, ತಾಲ್ಲೂಕಿನ ಬೆಲಗೂರು, ಮತ್ತೋಡು, ಮಾಡದಕೆರೆ, ಬಾಗೂರು, ಬುರುಡೇ ಕಟ್ಟೆ, ಬಳ್ಳೇಕೆರೆ, ಮಲ್ಲಪ್ಪನಹಳ್ಳಿ, ಜಾನಕಲ್ಲು, ಬೋಕಿಕೆರೆ ಸೇರಿ ಹಲವು ದೇವಾಲಯಗಳಲ್ಲಿ ಶ್ರೀರಾಮನವಮಿ ವಿಶೇಷ ಪೂಜೆ, ಭಜನೆ ಕಾರ್ಯಕ್ರಮಗಳು ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.