ADVERTISEMENT

ಮಹಾನ್‌ ವ್ಯಕ್ತಿಗಳದು ನಿಸ್ವಾರ್ಥ ಜೀವನ: ಜಿ.ಎಸ್‌. ಕುಮಾರ್‌

ಶಿವದಾಸ್‌ ಘೋಷ್‌ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಜಿ.ಎಸ್‌. ಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 2:58 IST
Last Updated 19 ಸೆಪ್ಟೆಂಬರ್ 2022, 2:58 IST
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಎಸ್‌.ಯು.ಸಿ.ಐ ಸ್ಥಳೀಯ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾಮ್ರೇಡ್‌ ಶಿವದಾಸ್‌ ಘೋಷ್‌ರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಶಿವದಾಸ್‌ ಘೋಷ್‌ ಅವರ ಪುಸ್ತಕಗಳನ್ನು ಪಕ್ಷದ ರಾಜ್ಯ ಸಂಘಟನಾಕಾರ ಜಿ.ಎಸ್‌.ಕುಮಾರ್‌ ಬಿಡುಗಡೆಗೊಳಿಸಿದರು.
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಎಸ್‌.ಯು.ಸಿ.ಐ ಸ್ಥಳೀಯ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾಮ್ರೇಡ್‌ ಶಿವದಾಸ್‌ ಘೋಷ್‌ರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಶಿವದಾಸ್‌ ಘೋಷ್‌ ಅವರ ಪುಸ್ತಕಗಳನ್ನು ಪಕ್ಷದ ರಾಜ್ಯ ಸಂಘಟನಾಕಾರ ಜಿ.ಎಸ್‌.ಕುಮಾರ್‌ ಬಿಡುಗಡೆಗೊಳಿಸಿದರು.   

ಚಿತ್ರದುರ್ಗ: ಮಹಾನ್ ವ್ಯಕ್ತಿಗಳಿಗೆ ವೈಯಕ್ತಿಕ ಬದುಕು ಮತ್ತು ಸಾಮಾಜಿಕ ಬದುಕು ಬೇರೆಯಾಗಿರುವುದಿಲ್ಲ. ಅವರು ಸಾಮಾಜಿಕ ಬದುಕನ್ನೇ ತಮ್ಮ ಬದುಕನ್ನಾಗಿಸಿಕೊಂಡಿರುತ್ತಾರೆ. ಅವರದು ನಿಜವಾದ ನಿಸ್ವಾರ್ಥ ಜೀವನ ಎಂದು ಎಸ್‌.ಯು.ಸಿ.ಐ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಸಂಘಟನಾಕಾರ ಜಿ.ಎಸ್‌. ಕುಮಾರ್‌ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಎಸ್‌.ಯು.ಸಿ.ಐ ಸ್ಥಳೀಯ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಶಿವದಾಸ್‌ ಘೋಷ್‌ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕರಾದ ನೇತಾಜಿ, ಭಗತ್ ಸಿಂಗ್‌, ಸೂರ್ಯಸೇನ್‌‌, ಚಿತ್ತರಂಜನ್‌ ದಾಸ್‌ ಇವರೆಲ್ಲರೂ ಸಾಮಾಜಿಕ ಬದುಕನ್ನೇ ತಮ್ಮ ಬದುಕನ್ನಾಗಿಸಿಕೊಂಡರು . ಶಿವದಾಸ್‌ ಘೋಷ್‌ ಕೂಡ ಇಂತಹ ಮಹಾನ್ ಬದುಕನ್ನು ನಡೆಸಿದರು’ ಎಂದರು.

ADVERTISEMENT

‘ಬಂಡವಾಳಶಾಹಿ ವ್ಯವಸ್ಥೆ ಕಿತ್ತೊಗೆದು ಕಾರ್ಮಿಕ ವರ್ಗದ ಕ್ರಾಂತಿ ಆಗಬೇಕು. ಅದನ್ನು ನೆರವೇರಿಸಲು ಒಂದು ನೈಜ ಕಮ್ಯುನಿಸ್ಟ್‌ ಪಕ್ಷದ ಸ್ಥಾಪನೆ ಅನಿವಾರ್ಯ ಎಂಬುದನ್ನು ಮನಗಂಡ ಶಿವದಾಸ್‌ ಎಸ್‌.ಯು.ಸಿ.ಐ. ಕಮ್ಯುನಿಸ್ಟ್‌ ಪಕ್ಷವನ್ನು ಸ್ಥಾಪಿಸಿದರು. ಓರ್ವ ಕಮ್ಯುನಿಸ್ಟ್‌ನಲ್ಲಿ ಇರಬೇಕಾದ ಜೀವನ ಮೌಲ್ಯಗಳು ಕೇವಲ ಮಾತಿಗೆ ಸೀಮಿತವಾಗದೆ ನಿಜ ಜೀವನದಲ್ಲಿ ಅವುಗಳ ಅಳವಡಿಕೆಯಾಗುವುದು ಬಹಳ ಮುಖ್ಯ ಎಂಬುದನ್ನು ಅವರು ತೋರಿಸಿಕೊಟ್ಟರು’ ಎಂದು ಹೇಳಿದರು.

‘ಜನ್ಮ ಶತಾಬ್ದಿ ಸಂದರ್ಭದಲ್ಲಿ ಅವರ ಚಿಂತನೆಗಳನ್ನು ಕಾರ್ಮಿಕ ವರ್ಗ ಮೈಗೂಡಿಸಿಕೊಳ್ಳಬೇಕು. ಅದನ್ನು ಸಮಾಜದಲ್ಲಿ ಹರಡಬೇಕು. ಜತೆಗೆ ದೇಶದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಸನ್ನದ್ಧರಾಗಬೇಕು’ ಎಂದು ಕರೆ ನೀಡಿದರು.

ಇದೇ ವೇಳೆ ಶಿವದಾಸ್ ಘೋಷ್‌ ರವರ ಭಾಷಣಗಳನ್ನಾಧರಿಸಿದ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತು ನಮ್ಮ ಕರ್ತವ್ಯಗಳು, ಆಗಸ್ಟ್ 15ರ ಸ್ವಾತಂತ್ರ್ಯ ಮತ್ತು ಜನತೆಯ ವಿಮುಕ್ತಿ, ಚೀನಾದ ಸಾಂಸ್ಕೃತಿಕ ಕ್ರಾಂತಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ವಿಜಯ್‌ ಕುಮಾರ್‌, ಸದಸ್ಯರಾದ ರವಿಕುಮಾರ್‌, ಸುಜಾತ, ವಿನಯ್‌, ಕುಮಾರ್‌, ಆರ್‌.ಮೇಘನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.