ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ವಡೇರಹಳ್ಳಿಯಲ್ಲಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಗಾಂಜಾವನ್ನು ರಾಂಪುರ ಠಾಣೆಯ ಪೊಲೀಸರು ಪತ್ತೆ ಮಾಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ರುದ್ರೇಶ್, ಕೂಡ್ಲಗಿ ತಾಲ್ಲೂಕಿನ ಸುಮಂತ್, ಮೊಳಕಾಲ್ಮುರು ತಾಲ್ಲೂಕಿನ ರಾಂಪುರದ ಮಂಜುನಾಥ್ ಹಾಗೂ ಜಂಬುನಾಥ್ ಬಂಧಿತರು. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ.
ಗಾಂಜಾ ಬೆಳೆದ ಜಮೀನು ರಾಂಪುರದ ಮಂಜುನಾಥ್ ಹಾಗೂ ಜಂಬುನಾಥ್ ಸಹೋದರರಿಗೆ ಸೇರಿದೆ. ಮಂಜುನಾಥ್ ಸಹೋದರರ 36 ಎಕರೆ ಭೂಮಿಯಲ್ಲಿ ಐದು ಎಕರೆಯನ್ನು ವರ್ಷಕ್ಕೆ ₹ 1 ಲಕ್ಷದಂತೆ ರುದ್ರೇಶ್ ಗುತ್ತಿಗೆ ಪಡೆದಿದ್ದು, ಸುಮಂತ್ ಮಧ್ಯಸ್ಥಿಕೆಯಲ್ಲಿ ಈ ವ್ಯವಹಾರ ನಡೆದಿತ್ತು. ನಾಲ್ಕು ಎಕರೆ 20 ಗುಂಟೆಯಲ್ಲಿ ಗಾಂಜಾ ಬೆಳೆಯಲಾಗಿತ್ತು. 10 ಸಾವಿರ ಗಾಂಜಾ ಗಿಡಗಳಿದ್ದು, ಎರಡು ಸಾವಿರ ಕಿತ್ತುಹಾಕಲಾಗಿದೆ. ₹ 2 ಕೋಟಿ ಮೌಲ್ಯದ ಗಾಂಜಾ ಇದೆಂದು ಅಂದಾಜಿಸಲಾಗಿದೆ ಎಂದು ಎಸ್ಪಿ ಜಿ. ರಾಧಿಕಾ ಮಾಹಿತಿ ನೀಡಿದ್ದಾರೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ₹ 2.90 ಲಕ್ಷ ಮೌಲ್ಯದ 145 ಕೆ.ಜಿ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಾಣಿಕ ಗುಂಡಪ್ಪ ಜಾಂತೆ ಎಂಬಾತನನ್ನು ಬಂಧಿಸಿನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.