ಚಿತ್ರದುರ್ಗ: ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕು ಸೇರಿ ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಸೋನೆಯಂತೆ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.
ರಾತ್ರಿ 8 ಗಂಟೆಗೆ ಆರಂಭವಾದ ಮಳೆ ನಿಧಾನವಾಗಿ ಸುರಿಯಲಾರಂಭಿಸಿತು. ರಾತ್ರಿ ನಿರಂತರವಾಗಿ ಮಳೆ ಬಿದ್ದ ಪರಿಣಾಮ ಚರಂಡಿ, ಕಾಲುವೆಗಳು ತುಂಬಿ ಹರಿದವು. ಬರದಿಂದ ತತ್ತರಿಸಿದ್ದ ರೈತರು ಹರ್ಷಗೊಂಡಿದ್ದಾರೆ. ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಜಲಮೂಲಗಳಿಗೆ ನೀರು ಹರಿದುಬಂದಿದೆ.
ಹೊಸದುರ್ಗ ಪಟ್ಟಣದಲ್ಲಿ 12 ಸೆಂ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ವೇದಾವತಿ ನದಿಯಲ್ಲಿ ಉತ್ತಮವಾಗಿ ನೀರು ಹರಿಯುತ್ತಿದೆ. ಬ್ಯಾರೇಜ್ಗಳು ಭರ್ತಿಯಾಗಿವೆ. ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನಲ್ಲಿ ಕೂಡ ಉತ್ತಮ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೇಗಳ ಕಣಿವೆ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಬೆಟ್ಟದ ಮೇಲಿನಿಂದ ನೀರು ಹರಿಯುತ್ತಿದ್ದು, ಜಲಪಾತ ಸೃಷ್ಟಿಯಾಗಿದೆ.
ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ವ್ಯಾಪ್ತಿಯಲ್ಲಿ 5 ಸೆಂ.ಮೀ, ಬಾಗೂರು 4 ಸೆಂ.ಮೀ, ಚಿತ್ರದುರ್ಗದಲ್ಲಿ 2 ಸೆಂ.ಮೀ, ಐನಹಳ್ಳಿಯಲ್ಲಿ 3 ಸೆಂ.ಮೀ ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 3 ಸೆಂ.ಮೀ, ಹಿರಿಯೂರು, ಬಬ್ಬೂರಿನಲ್ಲಿ 2. ಸೆಂ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ 3 ಸೆಂ.ಮೀ, ರಾಮಗಿರಿ, ಬಿ.ದುರ್ಗ, ಎಚ್.ಡಿ.ಪುರದಲ್ಲಿ 2 ಸೆಂ.ಮೀ ಮಳೆ ಸುರಿದಿದೆ.
‘ಹೊಸದುರ್ಗ ಪಟ್ಟಣದ 8 ಮನೆಗಳಿಗೆ ನೀರು ನುಗ್ಗಿದೆ. ಚಿತ್ರದುರ್ಗ ನಗರದ ಎರಡು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ 8 ಎಕರೆ ತೋಟಗಾರಿಕೆ ಬೆಳೆಗಳೆಗೆ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.