ಹೊಳಲ್ಕೆರೆ: ಪಟ್ಟಣದ ಸುತ್ತಲಿನ ಗ್ರಾಮಗಳ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಗಳನ್ನು ಪುರಸಭೆಗೆ ಸೇರಿಸುವುದನ್ನು ವಿರೋಧಿಸಿ ಶನಿವಾರ ಒಂಟಿಕಂಬದ ಮಠದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಸುತ್ತಲಿನ 9 ಹಳ್ಳಿಗಳನ್ನು ಸೇರಿಸಿ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಗ್ರಾಮಸ್ಥರ ಗಮನಕ್ಕೆ ತರದೆ ಏಕಾಏಕಿ ಗ್ರಾಮಗಳನ್ನು ಪುರಸಭೆಗೆ ಸೇರಿಸಲಾಗಿದೆ. ಇದರಿಂದ ಗ್ರಾಮಗಳಿಗೆ ಸರಿಯಾಗಿ ಅನುದಾನ ಸಿಗುವುದಿಲ್ಲ. ಗ್ರಾಮಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಇರಲಿ ಎಂದು ಆಗ್ರಹಿಸಿದರು.
‘ನಮ್ಮ ಗ್ರಾಮಗಳು ಪುರಸಭೆಗೆ ಸೇರ್ಪಡೆ ಆಗುವುದರಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕೈತಪ್ಪಿ ಹೋಗುತ್ತದೆ. ಇದರಿಂದ ರೈತರ ಹೊಲಗಳಿಗೆ ರಸ್ತೆ, ಬದು ನಿರ್ಮಾಣ, ಕೃಷಿಹೊಂಡ, ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮತ್ತಿತರ ಕೆಲಸಗಳು ಆಗುವುದಿಲ್ಲ. ನರೇಗಾ ಯೋಜನೆ ತಪ್ಪಿ ಹೋಗುವುದರಿಂದ ಗ್ರಾಮೀಣ ಜನರಿಗೆ ಕೂಲಿ ಕೆಲಸವೂ ಸಿಗುವುದಿಲ್ಲ. ಗ್ರಾಮಗಳು ಮೂಲಸೌಕರ್ಯ ಇಲ್ಲದೆ ಸೊರಗಬೇಕಾಗುತ್ತದೆ. ಮನೆ, ಹೊಲದ ಕಂದಾಯ ಹೆಚ್ಚಾಗುವುದರಿಂದ ಆರ್ಥಿಕ ಹೊರೆಯೂ ಆಗುತ್ತದೆ. ನಮಗೆ ಪುರಸಭೆ ಬೇಡ’ ಎಂದು ಒತ್ತಾಯಿಸಿದರು.
ಯಥಾಸ್ಥಿತಿ ಕಾಪಾಡುವಂತೆ ಶಾಸಕರು, ಸಂಸದರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್ ನಾಯ್ಕ, ಶ್ವೇತಾ, ಸಿಂಧೂ, ಭಾಗ್ಯಜ್ಯೋತಿ, ಈರಾನಾಯ್ಕ, ಸಣ್ಣಪಾಲೇಗೌಡ, ಓಬಣ್ಣ, ಜಯಲಕ್ಷ್ಮಿ, ರಮೇಶ್, ಸಾವಿತ್ರಮ್ಮ, ವಿಜಯಮ್ಮ, ದೇವರಾಜ್, ಶಿವು, ಮಂಜಣ್ಣ, ಮುಖಂಡರಾದ ವೆಂಕಟೇಶ ನಾಯ್ಕ, ತಿಪ್ಪೇಸ್ವಾಮಿ, ಚಂದ್ರ ನಾಯ್ಕ, ಜಯನಾಯ್ಕ, ಮಹಲಿಂಗ ನಾಯ್ಕ, ಕಣಿವೆ ಲೋಕೇಶ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.