ಪ್ರಜಾವಾಣಿ ವಾರ್ತೆ
ಮೊಳಕಾಲ್ಮುರು: ನೂತನವಾಗಿ ಕೈಗೆತ್ತಿಕೊಳ್ಳಲಿರುವ ತಾಲ್ಲೂಕಿನ ಬಾಂಡ್ರಾವಿ-ಹನುಮಾಪುರ ಬೈಪಾಸ್ ರಸ್ತೆ ಕಾಮಗಾರಿಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಿನ ಆದೇಶದಂತೆ ಜಮೀನಿನ ಮೌಲ್ಯದ ನಾಲ್ಕು ಪಟ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು. ಈ ರಸ್ತೆ ನಿರ್ಮಾಣದಿಂದ ಒಟ್ಟು 16. 2 ಎಕರೆ ಜಮೀನು ಸ್ವಾಧೀನವಾಗಲಿದೆ. ಇದಕ್ಕೆ ಅಂದಾಜು ₹ 2 ಕೋಟಿ ಅಗತ್ಯವಿದೆ. ಪರಿಹಾರದ ಹಣ ಪ್ರಸ್ತುತ ಜಿಲ್ಲಾ ಉಪ ವಿಭಾಗಾಧಿಕಾರಿ ಖಾತೆಯಲ್ಲಿದ್ದು, ರೈತರು ಒಪ್ಪಿಗೆ ಸೂಚಿಸಿದಲ್ಲಿ ಖಾತೆಗಳಿಗೆ ಜಮೆ ಮಾಡಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದರು.
ಕೆಲ ರೈತರು ಪರಿಹಾರ ಕಡಿಮೆಯಾಗಿದೆ. ನ್ಯಾಯಾಲಯ ಮೊರೆ ಹೋಗುವುದಾಗಿ ಹೇಳಿದರು.
‘ನ್ಯಾಯಾಲಯ ಮೊರೆ ಹೋದಲ್ಲಿ ಹೆಚ್ಚುವರಿ ಪರಿಹಾರ ಕೊಡುವ ಕುರಿತು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ಬರುತ್ತದೆ. ಆಗ ಸಾಧ್ಯವಿದ್ದಲ್ಲಿ ಹೆಚ್ಚಿನ ಪರಿಹಾರ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.
ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಅನುದಾನ ತಾಲ್ಲೂಕಿಗೆ ಮಂಜೂರಾಗಿದೆ. ಈ ಭಾಗದಲ್ಲಿನ ಸಂಚಾರ ಅವ್ಯವಸ್ಥೆ ತಡೆಯಲು ಸೇವಾ ರಸ್ತೆ ನಿರ್ಮಾಣಕ್ಕೆ ಇಷ್ಟು ದೊಡ್ಡ ಪ್ರಮಾಣದ ಅನುದಾನ ನೀಡಲಾಗಿದೆ. ಈ ರಸ್ತೆಯಿಂದ ಸಾಕಷ್ಟು ಅನುಕೂಲವಾಗಲಿದ್ದು, ಕಾಮಗಾರಿ ಆರಂಭಕ್ಕೆ ಅನುವು ಮಾಡಿಕೊಡಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಮನವಿ ಮಾಡಿದರು.
ಕೆಲ ರೈತರು ಪರಿಹಾರಕ್ಕೆ ಒಮ್ಮತ ಸೂಚಿಸದೇ ಸಭೆಯಿಂದ ಹೊರ ನಡೆದರು.
ಉಪ ವಿಭಾಗಾಧಿಕಾರಿ ಮಹಮದ್ ಜಿಲಾನಿ, ತಹಶೀಲ್ದಾರ್ ಟಿ. ಜಗದೀಶ್, ಲೋಕೋಪಯೋಗಿ ಎಇಇ ಮೋನಪ್ಪ, ಎಂಜಿನಿಯರ್ ಲಕ್ಷ್ಮಿನಾರಾಯಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.