ADVERTISEMENT

ಆಯುಷ್ಯ ಇದ್ದಷ್ಟು ಬದುಕುವುದು ಗ್ಯಾರಂಟಿ; ಹೆದರಿಕೆ ಏಕೆ?: ಉದ್ಯಮಿ ನಾಗಭೂಷಣ್

ಸುವರ್ಣಾ ಬಸವರಾಜ್
Published 8 ಮೇ 2021, 3:35 IST
Last Updated 8 ಮೇ 2021, 3:35 IST
ನಾಗಭೂಷಣ್
ನಾಗಭೂಷಣ್   

ಹಿರಿಯೂರು: ‘ಆಯುಷ್ಯ ಇದ್ದಷ್ಟು ಬದುಕೇ ಬದುಕುತ್ತೇವೆ. ಕೊರೊನಾದಿಂದ ಸಾಯಬೇಕೆಂದಿದ್ದರೆ, ಸತ್ತೇ ಸಾಯುತ್ತೇವೆ. ದೇವರ ಮೇಲೆ ಭಾರ ಹಾಕಿ ಎದುರಿಸಿದರೆ ನಮ್ಮನ್ನು ನಂಬಿದವರು ನೆಮ್ಮದಿಯಿಂದ ಇರುತ್ತಾರೆ. ಕುಟುಂಬಸ್ಥರ ಮುಖದಲ್ಲಿ ನಗುವಿದ್ದರೆ ನಾವೂ ಬೇಗ ಗುಣಮುಖರಾಗುತ್ತೇವೆ’.

ಮಲೇಷ್ಯಾ ನಾಗಭೂಷಣ್ ಎಂದೇ ಹೆಸರಾಗಿರುವ ಹಿರಿಯೂರಿನ ಉದ್ಯಮಿ ನಾಗಭೂಷಣ್ ಅವರ ಖಚಿತ ಅಭಿಪ್ರಾಯವಿದು.

‘ವ್ಯವಹಾರದ ಕಾರಣಕ್ಕೆ ಏಪ್ರಿಲ್ ಮೊದಲ ವಾರ ಚೆನ್ನೈಗೆ ಹೋಗಿ, ಅಲ್ಲಿಂದ ವಿಜಯವಾಡಕ್ಕೆ ನಂತರ ಬೆಂಗಳೂರಿಗೆ ಬರುವ ವೇಳೆಗೆ ತುಂಬ ಸುಸ್ತಾಗಿತ್ತು. ಕುಸುಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ನಾನು ಅಪ್ಪಟ ಆಸ್ತಿಕ. ದೇವರಿದ್ದಾನೆ. ಯಾರೂ ಹೆದರಬೇಡಿ ಎಂದು ಸ್ಪರ್ಶ ಆಸ್ಪತ್ರೆ ಸೇರುವ ಮೊದಲು ಮನೆಯವರಿಗೆಲ್ಲ ಧೈರ್ಯ ಹೇಳಿದ್ದೆ. ಮೂರು ದಿನಗಳ ಕಾಲ ಐಸಿಯುನಲ್ಲಿದ್ದದ್ದು ನನಗೆ ನೆನಪೇ ಇಲ್ಲ. ಎಚ್ಚರ ಬಂದ ಮೇಲೆ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಿದರು. 14 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಸಕ್ಕರೆ ಕಾಯಿಲೆ ಇರುವ ಕಾರಣ ಏನಾಗುತ್ತದೋ ಎಂಬ ಅಳುಕು ಮನಸ್ಸಿನ ಮೂಲೆಯಲ್ಲಿ ಕಾಡುತ್ತಿತ್ತು. ಕೊನೆಗೂ ಕೊರೊನಾ ಗೆದ್ದು ಪುನರ್ಜನ್ಮದೊಂದಿಗೆ ಮನೆಗೆ ಮರಳಿದ್ದೇನೆ’.

ADVERTISEMENT

‘ಸ್ವ್ಯಾಬ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ತಿಳಿದಾಕ್ಷಣಕ್ಕೆ ಎಲ್ಲರಲ್ಲೂ ಆತಂಕ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಅದೊಂದು ಕ್ಷಣ ಧೈರ್ಯ ತಂದುಕೊಂಡಲ್ಲಿ ಅರ್ಧ ಸೋಂಕು ವಾಸಿಯಾದಂತೆ. ವೈದ್ಯರು ನೀಡುವ ಚಿಕಿತ್ಸೆಯ ಜೊತೆಗೆ ನಮ್ಮ ಮಾನಸಿಕ ಸ್ಥೈರ್ಯವೂ ಕೆಲಸ ಮಾಡಿದರೆ ಗುಣಮುಖರಾಗುವುದು ಕಷ್ಟವಲ್ಲ. ಹುಟ್ಟಿದ ಎಲ್ಲರಿಗೂ ಸಾವು ಖಚಿತ. ಅದಕ್ಕೆ ಭಯವೇಕೆ? ಬದುಕಿನಲ್ಲಿ ಬರುವ ಎಂತೆಂತಹ ಕಷ್ಟಗಳನ್ನು ಎದುರಿಸಿದ್ದೇವೆ. ಅದರಲ್ಲಿ ಇದೂ ಒಂದು ಎಂದು ಭಾವಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.