ಚಿತ್ರದುರ್ಗ: ಅಂಗವಿಕಲರ ಯೋಜನೆಗಳ ತಾಲ್ಲೂಕು ನೋಡೆಲ್ ಅಧಿಕಾರಿಯನ್ನಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ನೇಮಕ ಮಾಡಿರುವುದನ್ನು ವಿರೋಧಿಸಿ ಅಂಗವಿಕಲರು ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಅಂಗವಿಕಲರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ನೇತೃತ್ವದಲ್ಲಿ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಅಂಗವಿಕಲರೇ ಜವಾಬ್ದಾರಿ ನಿರ್ವಹಿಸಿದರೆ ಸಮಸ್ಯೆ ಹಾಗೂ ಅಗತ್ಯಗಳ ಬಗ್ಗೆ ಅರಿವು ಇರುತ್ತದೆ. ಅರ್ಹ ಅಂಗವಿಕಲರಿಗೆ ಸೌಲಭ್ಯಗಳು ತಲುಪುತ್ತವೆ. ಈ ಉದ್ದೇಶದಿಂದ ರಾಜ್ಯದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನಾಗಿ ನೇಮಕ ಮಾಡಲಾಗಿದೆ. ಪದವೀಧರರನ್ನು ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 5,150 ಅಂಗವಿಕಲರಿಗೆ ಸರಿಯಾದ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗವಿಕಲರ ಅಧಿನಿಯಮದ ಅನ್ವಯ ಅಂಗವಿಕಲರಿಗೆ ಸರಿಯಾದ ತರಬೇತಿ ನೀಡುತ್ತಿಲ್ಲ. ಈ ನಡುವೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಇಲಾಖೆಯ ಹೊಣೆ ನೀಡುತ್ತಿರುವುದು ತಪ್ಪು. ಇದರಿಂದ ಅಂಗವಿಕಲರಿಗೆ ತೊಂದರೆ ಉಂಟಾಗುತ್ತದೆ. ಅರ್ಹ ಅಂಗವಿಕಲರಿಗೆ ಈ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.