ಹೊಸದುರ್ಗ: ‘ಹರಿಹರ ಜನಮಾನಸದ, ದೇಸಿಯ ಸ್ವಾಭಿಮಾನದ ಕವಿ. ಜನಸಮುದಾಯದಲ್ಲಿ ಇದ್ದ ಕಥನಕಗಳನ್ನು ತನ್ನ ಶ್ರೀರಕ್ಷೆಯಲ್ಲಿ ರಗಳೆಗಳ ಮೂಲಕ ರೂಪಿಸಿದ್ದಾನೆ. ರಗಳೆಗೆ ರಾಜ ಮಾರ್ಗವನ್ನು ತೋರಿದ ಕವಿ’ ಎಂದು ಮೈಸೂರಿನ ಚಿಂತಕ ಡಾ.ಅರವಿಂದ ಮಾಲಗತ್ತಿ ತಿಳಿಸಿದರು.
‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಸೋಮವಾರ ‘ಹರಿಹರನ ದಲಿತ ಪ್ರಜ್ಞೆ’ ಕುರಿತು ಉಪನ್ಯಾಸ ನೀಡಿದರು.
‘ದೊರೆಯ ಚರಿತೆಗಳು ಭವಿ ಚರಿತೆಗಳೆಂದು ಅವುಗಳನ್ನು ದೂರಿಟ್ಟು, ಶಿವಭಕ್ತರನ್ನು ತಲೆಯ ಮೇಲೆ ಹೊತ್ತು ಹರಿಹರನ ಕೃತಿಗಳು ಮೆರೆಯುತ್ತವೆ. ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನನ್ನಾಗಿ, ಅಸಾಮಾನ್ಯನನ್ನು ಸಾಮಾನ್ಯನನ್ನಾಗಿ ರಗಳೆಗಳಲ್ಲಿ ಚಿತ್ರಿಸಿ
ದ್ದಾನೆ. ಈತನ ರಗಳೆಗಳಲ್ಲಿ ತಳ ಸಮುದಾಯದ ಕಥಾನಾಯಕರೇ ಹೆಚ್ಚು. ಈತನ ವೃತ್ತಿ ಮತ್ತು ಶಿವಭಕ್ತಿ ಅಭೇದ್ಯ. ಶೂದ್ರೋದ್ಧಾರದ ಆದ್ಯ ಕವಿ. ಮೂಲತಃ ಸೈದ್ಧಾಂತಿಕ ಕವಿಯಾದ ಹರಿಹರನಿಗೆ ಕನ್ನಡ ಚರಿತ್ರೆಯಲ್ಲಿ ಸಿಗಬೇಕಾಗಿದ್ದ ಸ್ಥಾನಮಾನ ಸಿಗಲಿಲ್ಲ’ ಎಂದು ವಿವರಿಸಿದರು.
‘ಭಕ್ತಿಯ ಭಂಡಾರಿ ಮತ್ತು ಕ್ರಾಂತಿಕಾರಿಯಾಗಿದ್ದ ಹರಿಹರ ಮಹಾಕವಿಗೆ ಮತ್ತೊಬ್ಬರ ಅಧೀನದಲ್ಲಿ ಕೆಲಸ ಮಾಡುವ ಮನಸ್ಸಾಗದೆ ದ್ವಾರಸಮುದ್ರದಿಂದ ಪಂಪಾಕ್ಷೇತ್ರಕ್ಕೆ ಬಂದ. ಮನುಜರ ಮೇಲೆ ಕಾವ್ಯ ಬರೆಯಬಾರದು ಎನ್ನುವ ಸಂಕಲ್ಪ ಅವನದು. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಪ್ರತಿವರ್ಷ ತಪ್ಪದೆ ಹರಿಹರ ಮಹಾಕವಿ ಜಯಂತಿ ಆಚರಿಸುತ್ತಿದ್ದರು. ಅವರಿಗೆ ಹರಿಹರ ಎಂದರೆ ಅಪಾರ ಗೌರವ. 1973ರಲ್ಲಿ ಹರಿಹರದಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಮಹಾಮಂಟಪಕ್ಕೆ ‘ಮಹಾಕವಿ ಹರೀಶ್ವರ’ ಎಂದೇ
ನಾಮಕರಣ ಮಾಡಿದ್ದರು’ ಎಂದು ಪಂಡಿತಾರಾಧ್ಯ ಸ್ವಾಮೀಜಿ ಸ್ಮರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.