ADVERTISEMENT

ಚಿತ್ರದುರ್ಗ | ಲಕ್ಕವ್ವನಹಳ್ಳಿ ಒಡ್ಡು ಪ್ರವಾಸಿ ತಾಣವಾಗಿಸಲು ಸಕಾಲ

ನಗರಸಭೆ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಗೂ ಬೇಕಿಲ್ಲದಂತಾದ ಚೆಕ್‌ಡ್ಯಾಂ

ಸುವರ್ಣಾ ಬಸವರಾಜ್
Published 26 ಮಾರ್ಚ್ 2025, 7:43 IST
Last Updated 26 ಮಾರ್ಚ್ 2025, 7:43 IST
ವಾಣಿವಿಲಾಸ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ನೀರು ಪೂರೈಕೆ ಮಾಡಲು 1991ರಲ್ಲಿ ಲಕ್ಕವ್ವನಹಳ್ಳಿ ಸಮೀಪ ನಿರ್ಮಿಸಿರುವ ಒಡ್ಡಿನಲ್ಲಿ ನೀರು ತುಂಬಿ ಹರಿಯುತ್ತಿರುವುದು
ವಾಣಿವಿಲಾಸ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ನೀರು ಪೂರೈಕೆ ಮಾಡಲು 1991ರಲ್ಲಿ ಲಕ್ಕವ್ವನಹಳ್ಳಿ ಸಮೀಪ ನಿರ್ಮಿಸಿರುವ ಒಡ್ಡಿನಲ್ಲಿ ನೀರು ತುಂಬಿ ಹರಿಯುತ್ತಿರುವುದು   

ಹಿರಿಯೂರು: ಚಿತ್ರದುರ್ಗ–ಹಿರಿಯೂರು ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 1991ರಲ್ಲಿ ನಿರ್ಮಾಣಗೊಂಡಿದ್ದ ಲಕ್ಕವ್ವನಹಳ್ಳಿ ಒಡ್ಡು (ಚೆಕ್ ಡ್ಯಾಂ) ಈಗ ನಿರುಪಯುಕ್ತವಾಗಿದ್ದು, ನಗರಸಭೆ ಆಡಳಿತ ಬದ್ಧತೆ ತೋರಿದಲ್ಲಿ ಇದನ್ನು ಸುಂದರ ಪ್ರವಾಸಿ ತಾಣವನ್ನಾಗಿಸುವ ಎಲ್ಲ ಸಾಧ್ಯತೆಗಳಿವೆ.

1982ರಲ್ಲಿ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿರಿಯೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ₹85 ಲಕ್ಷ ವೆಚ್ಚದಲ್ಲಿ ಒಡ್ಡು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಪ್ರತಿ 15 ದಿನಕ್ಕೊಮ್ಮೆ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿ ಮೂಲಕ ಈ ಒಡ್ಡಿಗೆ ನೀರು ಹರಿಸಿ, ಅದನ್ನು ಶುದ್ಧೀಕರಿಸಿ ಎರಡೂ ನಗರಗಳಿಗೆ ಪೂರೈಸಲಾಗುತ್ತಿತ್ತು. ನದಿ ಪಾತ್ರದ ಹಳ್ಳಿಗಳ ಜನ ಕುಡಿಯುವ ನೀರನ್ನು ಮಲಿನಗೊಳಿಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರು ದೂರುತ್ತಿದ್ದರು.

2016ರಲ್ಲಿ ಶಾಸಕರಾಗಿದ್ದ ಡಿ. ಸುಧಾಕರ್ ಅವರು ಸಾರ್ವಜನಿಕರ ಬೇಡಿಕೆಗೆ ಮಣಿದು ಲಕ್ಕವ್ವನಹಳ್ಳಿ ಒಡ್ಡಿನ ಬದಲಾಗಿ, ಜಲಾಶಯದಿಂದ ನೇರವಾಗಿ ₹40 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆಗೆ ಸರ್ಕಾರದ ಮಂಜೂರಾತಿ ತಂದಿದ್ದರು. ಎಂಟು ವರ್ಷದಿಂದ ನಗರದ ಜನತೆಗೆ ಪೈಪ್‌ಲೈನ್ ಮೂಲಕ ವಾಣಿವಿಲಾಸ ಜಲಾಶಯದಿಂದ ಶುದ್ಧ ನೀರು ಸಿಗುತ್ತಿದೆ. ಆದರೆ ಕುಡಿಯುವ ನೀರಿನ ಸಂಗ್ರಹಕ್ಕೆಂದು ನಿರ್ಮಿಸಿದ್ದ ಲಕ್ಕವ್ವನಹಳ್ಳಿ ಒಡ್ಡು ನಿರುಪಯುಕ್ತವಾಗಿದೆ. ಪಂಪ್‌ಸೆಟ್ ಕೊಠಡಿಗಳು, ಪರಿವರ್ತಕಗಳು ಶಿಥಿಲವಾಗಿವೆ. 

ADVERTISEMENT

ಒಡ್ಡಿನಲ್ಲಿ ಈಚಿನ ದಿನಗಳಲ್ಲಿ ಹೂಳು ತುಂಬುತ್ತಿದೆ. ಮಳೆಯಾದಾಗ, ವೇದಾವತಿ ನದಿಗೆ ನಿರ್ಮಿಸಿರುವ ಒಡ್ಡು ತುಂಬಿ ಹರಿಯುತ್ತದೆ. ಅಲ್ಲದೇ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಿಗೆ ವಾಣಿವಿಲಾಸದ ನೀರನ್ನು ಇದೇ ಒಡ್ಡಿನ ಮೂಲಕ ಹರಿಸುವ ಕಾರಣ, ಇದು ಬಹುತೇಕ ವರ್ಷವಿಡೀ ಜೀವಂತವಾಗಿರುತ್ತದೆ. ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಒಡ್ಡು ನಗರಸಭೆಗೂ ಬೇಕಿಲ್ಲ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಗೂ ಬೇಕಿಲ್ಲದಂತಾಗಿದ್ದು, ಇದರ ಅಂಚಿನಲ್ಲಿ ಗಿಡಗಳು ಪೊದೆಯಂತೆ ಬೆಳೆದು ಇಡೀ ಪರಿಸರವನ್ನು ಮಲಿನಗೊಳಿಸಿವೆ.

ಪ್ರವಾಸಿತಾಣಕ್ಕೆ ಸೂಕ್ತ:

ಒಡ್ಡಿನಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದವರೆಗೆ ನೀರು ನಿಲ್ಲುತ್ತದೆ. ಒಡ್ಡಿನ ಎರಡೂ ಬದಿ ಉದ್ಯಾನ ನಿರ್ಮಿಸಿ, ಒಡ್ಡಿನಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಿದಲ್ಲಿ ನಗರದ ಜನತೆಗೆ ಕೂಗಳತೆಯ ದೂರದಲ್ಲಿ ಸುಂದರ ಪ್ರವಾಸಿ ತಾಣವೊಂದು ಸಿಕ್ಕಂತಾಗುತ್ತದೆ. ಸರ್ಕಾರದಿಂದ ಹಣಕಾಸು ನೆರವು ದೊರೆಯುವುದು ಕಷ್ಟ ಎನಿಸಿದಲ್ಲಿ ಖಾಸಗಿಯವರ ಜತೆ ಒಡಂಬಡಿಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಬಹುದು ಎಂಬುದು ಸಾರ್ವಜನಿಕ ವಲಯದಲ್ಲಿ ಹಲವು ವರ್ಷಗಳಿಂದ ಕೇಳಿ ಬಂದಿರುವ ಆಗ್ರಹ.

ಒಡ್ಡಿನಲ್ಲಿ ಸಂಗ್ರಹವಾಗಿರುವ ಮಣ್ಣು ತುಂಬ ಫಲವತ್ತತೆಯಿಂದ ಕೂಡಿದ್ದು ಉಚಿತವಾಗಿ ತುಂಬಲು ಅವಕಾಶ ಕೊಟ್ಟಲ್ಲಿ ತಿಂಗಳೊಪ್ಪತ್ತಿನಲ್ಲಿ ಹೂಳು ಮಣ್ಣು ರೈತರ ತೋಟಗಳನ್ನು ಸೇರುತ್ತದೆ. ನಂತರ ನದಿಯಂಚಿನ ಒತ್ತುವರಿ ತೆರವುಗೊಳಿಸಿ ಕಾಂಪೌಂಡ್ ಗೋಡೆ ಅಥವಾ ತಂತಿ ಬೇಲಿ ಅಳವಡಿಸಬೇಕು. ಗಿಡಗಂಟಿ–ಹುಲ್ಲಿನ ಆಗ ಇದೊಂದು ಸುಂದರ ಪ್ರವಾಸಿ ತಾಣವಾಗುತ್ತದೆ ಎನ್ನುವುದು ನಾಗರೀಕರ ಅನಿಸಿಕೆ.

ಹಿರಿಯೂರು ನಗರದ ಜನಸಂಖ್ಯೆ 70 ಸಾವಿರ ದಾಟಿದ್ದರೂ ಹೇಳಿಕೊಳ್ಳುವಂತಹ ಒಂದೇ ಒಂದು ಉದ್ಯಾನವಿಲ್ಲ. ನಿರುಪಯುಕ್ತವಾಗಿರುವ ಲಕ್ಕವ್ವನಹಳ್ಳಿ ಒಡ್ಡನ್ನು ಪ್ರವಾಸಿ ತಾಣವನ್ನಾಗಿಸಿದರೆ ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಲು ಅನುಕೂಲವಾಗುತ್ತದೆ
ಸಿ.ಆರ್.ಸ್ಮಿತಾ ರಾಘವೇಂದ್ರ ಹಿರಿಯೂರು
ನಗರಸಭೆಯಲ್ಲಿ ಕೆರೆ ಅಭಿವೃದ್ಧಿ ಯೋಜನೆಯಡಿ ಸಾಕಷ್ಟು ಅನುದಾನ ಲಭ್ಯವಿದ್ದು ನಗರಸಭೆ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಲಕ್ಕವ್ವನಹಳ್ಳಿ ಒಡ್ಡನ್ನು ಪ್ರವಾಸಿ ತಾಣವನ್ನಾಗಿಸಲು ಗಂಭೀರ ಪ್ರಯತ್ನ ಮಾಡುತ್ತೇವೆ
ಎ.ವಾಸೀಂ ಪೌರಾಯುಕ್ತರು ನಗರಸಭೆ. ಹಿರಿಯೂರು

ಸಾರ್ವಜನಿಕರ ಒತ್ತಾಯ ಏನು?

ಲಕ್ಕವ್ವನಹಳ್ಳಿ ಒಡ್ಡಿನ ಮೇಲ್ಭಾಗದಲ್ಲಿ ವೇದಾವತಿ ನದಿ ಪಾತ್ರದಲ್ಲಿನ ಒತ್ತುವರಿ ತೆರವುಗೊಳಿಸಬೇಕು ಒಡ್ಡಿನಲ್ಲಿ ತುಂಬಿರುವ ಫಲವತ್ತಾದ ಹೂಳನ್ನು ರೈತರಿಗೆ ಉಚಿತವಾಗಿ ನೀಡಬೇಕು ಸರ್ಕಾರ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಬೇಕು ಲಕ್ಕವ್ವನಹಳ್ಳಿ ರಸ್ತೆಯಿಂದ ಒಡ್ಡಿನ ಕಡೆ ಹೋಗುವ ರಸ್ತೆಯನ್ನು ವಿಸ್ತರಣೆ ಮಾಡಬೇಕು ಒಡ್ಡು ತುಂಬಿದ ನಂತರ ಮುಂದೆ ಸಾಗುವ ವೇದಾವತಿ ನದಿಯನ್ನು ಸ್ವಚ್ಛಗೊಳಿಸಬೇಕು ವೇದಾವತಿ ನದಿಗೆ ತಡೆಗೋಡೆ ನಿರ್ಮಿಸಬೇಕು ಪೊದೆಯನ್ನು ಸ್ವಚ್ಛಗೊಳಿಸಿ ಆಲಂಕಾರಿಕ ಗಿಡಗಳನ್ನು ಬೆಳೆಸಬೇಕು ವಾಯುವಿಹಾರಿಗಳಿಗೆ ವಾಕಿಂಗ್ ಪಥ ಒಡ್ಡಿನ ಮೇಲ್ಭಾಗದಲ್ಲಿರುವ ಹಳ್ಳಿಗಳಿಂದ ತ್ಯಾಜ್ಯ ಹರಿಸದಂತೆ ಕ್ರಮ ಕೈಗೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.